ಹೊಸ ದಿಗಂತ ವರದಿ, ಬೀದರ್
ಅಂತಾರಾಜ್ಯಕ್ಕೆ ಅಕ್ರಮವಾಗಿ ಮಾದಕ ವಸ್ತು ಸಾಗಿಸುತಿದ್ದ ವಾಹನದ ಮೇಲೆ ದಾಳಿ ನಡೆಸಿದ ಇಲ್ಲಿಯ ಮಂಠಾಳ ಠಾಣೆ ಪೊಲೀಸರ ತಂಡ ಓರ್ವ ಆರೋಪಿಯನ್ನು ಬಂಧಿಸಿ 17.50 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿಕೊಂಡ ಪ್ರಸಂಗ ತಾಲೂಕಿನ ಮನ್ನಳ್ಳಿ ಗಡಿಯಲ್ಲಿ ಜರಗಿದೆ.
ರಾಜಸ್ಥಾನದ ಬಾರಮೇರ್ ಜಿಲ್ಲೆಯ ಮೂಲದ ಸಾವಾಯಿ ರಾಮ್ (40) ಬಂಧಿತ ಆರೋಪಿಯಾಗಿದ್ದಾನೆ. ರಾಷ್ಟ್ರೀಯ ಹೆದ್ದಾರಿ 65ರ ಮಾರ್ಗವಾಗಿ ಮಾದಕ ವಸ್ತು ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಹುಮನಾಬಾದ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ನೇತೃತ್ವದಲ್ಲಿ ಮಂಠಾಳ ಸಿಪಿಐ ಕೃಷ್ಣಕುಮಾರ ಪಾಟೀಲ್ ಹಾಗೂ ಸಿಬ್ಬಂದಿಗಳಾದ ಶಿವಾನಂದ, ಅನೀಲ ಪುಣೆ, ಪ್ರತಾಪ, ತಾತೇರಾವ್ ಚವ್ಹಾಣ್ ವೆಂಕಟ್ ಯಾಧವ, ಶಿವಕುಮಾರ ಅವರನ್ನೊಳಗೊಂಡ ಪೊಲೀಸರ ತಂಡ, ಮಹಾರಾಷ್ಟ್ರದಿಂದ ತಮಿಳುನಾಡಿನ ಮದ್ರಾಸ್ಗೆ ಮಾದಕ ವಸ್ತು ಸಾಗಿಸುತಿದ್ದ ಕಂಟೇನರ್ ಲಾರಿ ಮೇಲೆ ದಾಳಿ ನಡೆಸಿ, 17.50 ಲಕ್ಷ ರೂ. ಮೌಲ್ಯದ 17 ಕೆ.ಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಮಾದಕ ವಸ್ತು ಸಾಗಾಟದ ಜಾಲ ಪತ್ತೆ ಮಾಡಿ ಜಪ್ತಿ ಮಾಡಿಕೊಂಡ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ಪ್ರಶಂಸನಾ ಪತ್ರದೊಂದಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದ್ದಾರೆ.