ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರದಲ್ಲಿ ಭೀಕರ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಪ್ರವಾಹ ಸೃಷ್ಟಿಯಾಗಿತ್ತು. ರಾಮನಗರದಲ್ಲಿನ ಭಕ್ಷಿ ಕೆರೆ ಒಡೆದು ಬೆಂಗಳೂರು-ಮೈಸೂರು ಹೆದ್ದಾರಿ ಹಾಗೂ ರೈಲು ಹಳಿಗಳು ಜಲಾವೃತಗೊಂಡು ರಾಮನಗರ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ನೂರಾರು ಮನೆಗಳಿಗೆ ಹಾನಿಯಾಗಿ ಜನ ಬೀದಿಗೆ ಬಂದರು. ಬೆಳೆದ ಬೆಳೆ, ಹೊಲ, ಗದ್ದೆ ಎಲ್ಲವೂ ಜಲಾವೃತವಾಗಿತ್ತು.
ಜನ ಜಾನುವಾರುಗಳು ಅಕ್ಷರಶಃ ನಲುಗಿ ಹೋಗಿದ್ದಾರೆ. ಮನೆಯಲ್ಲಿನ ಧವಸ-ಧಾನ್ಯಗಳೆಲ್ಲಾ ನೀರು ಪಾಲಾಗಿದ್ದು ಸಂಕಷ್ಟದಲ್ಲಿದ್ದ ಜನರಿಗೆ ಸೇವಾಭಾರತಿ ಟ್ರಸ್ಟ್ ನೆರವು ನೀಡಿದೆ. ರಾಮನಗರದ ಅರ್ಕೇಶ್ವರ ಬಡಾವಣೆಯಲ್ಲಿ, ನೆರೆಗೆ ಸಿಲುಕಿದ ಸುಮಾರು 205 ಕುಟುಂಬಗಳ 850 ಜನರಿಗೆ ದಿನ ನಿತ್ಯ ಬಳಕೆ ವಸ್ತುಗಳಾದ ಬಟ್ಟೆ, ಚಾಪೆ, ಬೆಡ್ಶೀಟ್, ತಟ್ಟೆ, ಲೋಟ ಮುಂತಾದ ಸಾಮಗ್ರಿಗಳನ್ನು ವಿತರಣೆ ಮಾಡಿದರು.