ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಪ್ಟೆಂಬರ್ 10 ರಿಂದ 12ರವರೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಸಂಘಟನೆಗಳ ಸಮನ್ವಯ ಬೈಠಕ್ ಛತ್ತೀಸ್ಗಢದ ರಾಯಪುರದಲ್ಲಿ ನಡೆಯಲಿದೆ. ಈ ಬೈಠಕ್ ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘದ ವಿವಿಧ ಸಂಘಟನೆಗಳು ಪಾಲ್ಗೊಳ್ಳಲಿವೆ.
ವಿಶ್ವಹಿಂದು ಪರಿಷತ್, ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾಜಪಾ, ವಿದ್ಯಾಭಾರತಿ, ರಾಷ್ಟ್ರ ಸೇವಿಕಾ ಸಮಿತಿ, ವನವಾಸಿ ಕಲ್ಯಾಣಾಶ್ರಮ ಮುಂತಾದ 36 ವಿವಿಧ ಸಂಘಟನೆಗಳು ಇದರಲ್ಲಿ ಭಾಗವಹಿಸಲಿವೆ. ರಾ.ಸ್ವ.ಸಂಘದ ಸರಸಂಘಚಾಲಕರಾದ ಮೋಹನ್ ಭಾಗ್ವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಂಘದ ಇತರ ಐದು ಸಹಸರಕಾರ್ಯವಾಹರು ಫಾಲ್ಗೊಳ್ಳಲಿದ್ದು ಅನ್ಯಾನ್ಯ ಜವಾಬ್ದಾರಿ ಇರುವ ಪ್ರಮುಖರೂ ಕೂಡ ಭಾಗವಹಿಸಲಿದ್ದಾರೆ.
ರಾಷ್ಟ್ರೀಯತೆಯ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಸಂಘಟನೆಗಳು ಮತ್ತು ಈ ನಿಟ್ಟಿನಲ್ಲಿ ಕಾರ್ಯನಿರತರಾಗಿರುವ ಸ್ವಯಂಸೇವಕರೊಂದಿಗೆ ಸಮನ್ವಯ ಸಾಧಿಸಲು ಪ್ರತಿ ವರ್ಷವೂ ಅಖಿಲ ಭಾರತೀಯ ಮಟ್ಟದ ಸಮನ್ವಯ ಬೈಠಕ್ ಅನ್ನು ಸಂಘವು ಆಯೋಜಿಸುತ್ತದೆ. ಪ್ರಸ್ತುತ ಈ ವರ್ಷದ ಸಮನ್ವಯ ಬೈಠಕ್ ಅನ್ನು ಛತ್ತೀಸ್ ಗಢದ ರಾಯಪುರದಲ್ಲಿ ಆಯೋಜಿಸಲಾಗಿದೆ ಎಂದು ರಾ.ಸ್ವ.ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.