ಉಜ್ಜೈನ್ ಮಹಾಕಾಳೇಶ್ವರ ದೇಗುಲ ಪ್ರವೇಶಕ್ಕೆ ರಣಬೀರ್ ಕಪೂರ್ ದಂಪತಿಗೆ ತಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್ ತಾರೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮಧ್ಯಪ್ರದೇಶದ ಉಜ್ಜೈನ್​ನ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಬಜರಂಗ ದಳದ ಕಾರ್ಯಕರ್ತರು ಮುಖ್ಯ ದ್ವಾರದಲ್ಲೇತಡೆದಿದ್ದಾರೆ. ಈ ವೇಳೆ ಅವರನ್ನು ದೇವಾಲಯದೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು.
ರಣಬೀರ್ ಕಪೂರ್, ಆಲಿಯಾ ಭಟ್ ನಟನೆಯ ಮತ್ತು ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟೆಂಬರ್ 9ರಂದು ಬಿಡುಗಡೆಯಾಗಲಿದೆ. ಈ ನಿಟ್ಟಿನಲ್ಲಿ ಪ್ರಾರ್ಥನೆ ಸಲ್ಲಿಸಲು ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಆದರೆ, ಬಜರಂಗ ದಳದ ಕಾರ್ಯಕರ್ತರ ಪ್ರತಿಭಟನೆಯ ಬಿಸಿಯನ್ನು ಎದುರಿಸಬೇಕಾಯಿತು. ಗೋಮಾಂಸ ತಿನ್ನುತ್ತೇನೆ ಎಂಬ ರಣಬೀರ್ ಹೇಳಿಕೆಯನ್ನು ಖಂಡಿಸಿ ಕಪ್ಪು ಬಾವುಟ ಹಿಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ರಣಬೀರ್ ಕಪೂರ್ ಗೋಮಾತೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಗೋಮಾಂಸ ತಿನ್ನುವುದು ಒಳ್ಳೆಯದು ಎಂದು ಹೇಳಿದ್ದಾರೆ. ಹೀಗಾಗಿ ರಣಬೀರ್ ದಂಪತಿಗೆ ದೇವಾಲಯದೊಳಗೆ ಪ್ರವೇಶಿಸಲು ಬಿಡುವುದಿಲ್ಲ. ಗೋಮಾಂಸ ಭಕ್ಷಕರನ್ನು ದೇವಾಲಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಮತ್ತು ಗೋಮಾಂಸ ತಿನ್ನುವವರಿಗೆ ದೇವಾಲಯವನ್ನು ಪ್ರವೇಶಿಸಲು ಹೇಗೆ ಅನುಮತಿ ನೀಡಲಾಯಿತು ಎಂಬುದಕ್ಕೂ ಆಡಳಿತವು ಉತ್ತರಿಸಬೇಕೆಂದು ಬಜರಂಗ ದಳ ಕಾರ್ಯಕರ್ತರು ಕಿಡಿಕಾರಿದರು.
ಬಳಿಕ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಅಯಾನ್ ಮುಖರ್ಜಿ ಅವರನ್ನು ಸುರಕ್ಷಿತವಾಗಿ ಉಜ್ಜೈನ್​ ಜಿಲ್ಲಾಧಿಕಾರಿ ಮನೆಗೆ ಕರೆದುಕೊಂಡು ಹೋದರು. ನಂತರ ನಿರ್ದೇಶಕ ಅಯಾನ್ ಮತ್ತು ತಂಡಕ್ಕೆ ಮಾತ್ರವೇ ಮಹಾಕಾಳೇಶ್ವರನ ಆಶೀರ್ವಾದ ಪಡೆಯಲು ಅವಕಾಶ ನೀಡಲಾಯಿತು. ಆದರೆ, ಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದೇವರ ದರ್ಶನವನ್ನೂ ಪಡೆಯದೇ ವಾಪಸ್​ ಬರಬೇಕಾಯಿತು.
2011ರಲ್ಲಿ ರಾಕ್‌ಸ್ಟಾರ್ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ರಣಬೀರ್ ಕಪೂರ್ ಸಂದರ್ಶನವೊಂದರಲ್ಲಿ ಗೋಮಾಂಸದ ಬಗ್ಗೆ ಮಾತನಾಡಿದ್ದರು. ನನ್ನ ಕುಟುಂಬವು ಪೇಶಾವರದಿಂದ ಬಂದಿದೆ. ನನಗೆ ಮಟನ್, ಪಾಯ ಮತ್ತು ಗೋಮಾಂಸ ಇಷ್ಟ ಎಂದು ಹೇಳಿದ್ದರು. ಇದು ಬಜರಂಗ ದಳದ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!