ಹೊಸದಿಗಂತ ಡಿಜಿಟಲ್ ಡೆಸ್ಕ್
ಸಚಿವ ಉಮೇಶ ಕತ್ತಿಯವರ ಅಕಸ್ಮಿಕ ನಿಧನ ನಮ್ಮೆಲ್ಲರಿಗೂ ಅತೀವ ದುಃಖ ಉಂಟು ಮಾಡಿದೆ. ಎಂಟು ಬಾರಿ ಶಾಸಕರಾಗಿ, ಸಚಿವರಾಗಿ, ರಾಜ್ಯದ ಪ್ರಮುಖ ರಾಜಕಾರಣಿಗಳಲ್ಲೊಬ್ಬರಾಗಿ ಹೆಸರುಗಳಿಸಿದ್ದ ಕತ್ತಿಯವರ ನಿಧನ ದುರ್ದೈವದ ಸಂಗತಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್ ಕಂಬನಿ ಮಿಡಿದಿದ್ದಾರೆ.
ಕೋವಿಡ್ ಹಾವಳಿ ಮಿತಿಮೀರಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಕೈಗೊಂಡ ಅನೇಕ ಸೇವಾಕಾರ್ಯಗಳಿಗೆ ಕತ್ತಿಯವರು ಬೆನ್ನೆಲುಬಾಗಿ ನಿಂತಿದ್ದರು. ಕರ್ನಾಟಕ ಉತ್ತರ ಭಾಗದ ನೂರಾರು ಕಾರ್ಯಕರ್ತರಿಗೆ ಅತ್ಯಂತ ಆತ್ಮೀಯರಾಗಿದ್ದರು. ನೇರ ನಡೆ ನುಡಿಯ ಉಮೇಶ ಕತ್ತಿಯವರು ಅಕಸ್ಮಿಕವಾಗಿ ಅಗಲಿದ್ದು ದುರ್ದೈವದ ಸಂಗತಿ. ವಿಧಿಯ ನಿರ್ಣಯದ ಮುಂದೆ ನಾವೆಲ್ಲರೂ ಅಸಹಾಯಕರು ಎಂಬುದಕ್ಕೆ ಇದು ಪ್ರತ್ಯಕ್ಷ ಉದಾಹರಣೆಯೇ ಸರಿ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಪರಿವಾರಕ್ಕೆ ಭಗವಂತ ನೀಡಲಿ ಮತ್ತು ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸುವೆ ಎಂದು ವಿ.ನಾಗರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.