ಹೊಸದಿಗಂತ ವರದಿ ಧಾರವಾಡ:
ಶಿಕ್ಷಣದ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ ಬೆಳೆಸುವುದೇ ರಾಷ್ಟ್ರೋತ್ಥಾನ ಪರಿಷತ್ ಧ್ಯೇಯವಾಗಿದೆ ಎಂದು ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ದಿನೇಶ ಹೆಗಡೆ ಹೇಳಿದರು.
ನಗರದ ಸತ್ತೂರಿನಲ್ಲಿ ನೂತನ ರಾಷ್ಟ್ರೋತ್ಥಾನ ಶಾಲೆಯ ವಾಸ್ತು ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯಾದ್ಯಂತ ರಾಷ್ಟ್ರೋತ್ಥಾನದಿಂದ 23 ಶಾಲೆಗಳು ನಡೆಯುತ್ತಿವೆ. ಭಾರತೀಯ ಶಿಕ್ಷಣದಿಂದ ವ್ಯಕ್ತಿ ನಿರ್ಮಾಣ, ಆ ಮೂಲಕ ದೇಶ ನಿರ್ಮಾಣಕ್ಕೆ ಪೂರಕವಾಗುತ್ತದೆ. ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಇನ್ನೂ ಅಧಿಕ ಶಾಲೆಗಳನ್ನು ಆರಂಭಿಸಲು ಯೋಜಿಸಲಾಗಿದೆ ಎಂದರು.
1965ರಲ್ಲಿ ಆರಂಭವಾದ ರಾಷ್ಟ್ರೋತ್ಥಾನ ಪರಿಷತ್, ಶಿಕ್ಷಣ ಕ್ಷೇತ್ರದ ಜೊತೆಗೆ ಸಾಹಿತ್ಯ, ಆರೋಗ್ಯ, ಗೋ ರಕ್ಷಣೆ, ಯೋಗ ಕೇಂದ್ರ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ರಾ.ಸ್ವ. ಸಂಘದ ಪ್ರಾಂತ ಸಹ ಸಂಘಚಾಲಕ ಅರವಿಂದರಾವ್ ದೇಶಪಾಂಡೆ ಮಾತನಾಡಿ, ರಾಷ್ಟ್ರೀಯತೆಯ ಉತ್ಥಾನ ಕಾರ್ಯದಲ್ಲಿ, ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡುವಲ್ಲಿ ರಾಷ್ಟ್ರೋತ್ಥಾನ ವಿದ್ಯಾಲಯಗಳು ಸದಾ ಮುಂಚುಣಿಯಲ್ಲಿವೆ. ಇಂಥಃ ಶಾಲೆಗಳು ರಾಜ್ಯದಲ್ಲಿ ಇನ್ನೂ ವಿಸ್ತಾರವಾಗಲಿ ಎಂದರು.