ವಿನಾಕಾರಣ 1522 ಮಹಿಳೆಯರ ಗರ್ಭಕೋಶ ಶಸ್ತ್ರ ಚಿಕಿತ್ಸೆ: ಸಮಗ್ರ ವರದಿ ಬಳಿಕ ವೈದ್ಯ ವಿರುದ್ಧ ಕ್ರಮ ಎಂದ ಸಿಎಂ

ಹೊಸದಿಗಂತ ವರದಿ,ಹಾವೇರಿ:

ಜಿಲ್ಲೆಯ ರಾಣೇಬೆನ್ನೂರಿನ ಸರ್ಕಾರಿ ವೈದ್ಯ ಡಾ. ಶಾಂತ.ಪಿ ಎನ್ನುವ ವೈದ್ಯ ವಿನಾಕಾರಣ ೧೫೨೨ ಮಹಿಳೆಯರ ಗರ್ಭಕೋಶ ಶಸ್ತ್ರ ಚಿಕಿತ್ಸೆ ಮಾಡಿರುವ ಕುರಿತು ಸಮಗ್ರ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವೆ. ವರದಿ ಬಂದ ನಂತರ ತಪ್ಪಿತಸ್ತರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದಿರು.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮುನವಳ್ಳಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವೈದ್ಯ ೧೫೦೦ ಹೆಚ್ಚು ಮಹಿಳೆಯರ ಗರ್ಭಕೋಶ ತೆಗೆದು ಅನ್ಯಾಯ ಮಾಡಿದ್ದಾನೆ ಅನ್ನುವ ಕೇಸ್ ನಡೆಯುತ್ತಿದೆ. ಅವನ ಬಗ್ಗೆ ಈಗಾಗಲೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇನ್ನೂ ಕೆಲವು ಪ್ರಕರಣಗಳು ಕೋರ್ಟಿನಲ್ಲಿವೆ. ಅನ್ಯಾಯಕ್ಕೆ ಒಳಗಾದ ಮಹಿಳೆಯರಿಗೆ ಏನಾದರೂ ಸಹಾಯ ಸಾಧ್ಯವಿದ್ದರೆ ಖಂಡಿತವಾಗಿ ಸರಕಾರದಿಂದ ಸಹಾಯ ಮಾಡುತ್ತೇನೆ. ವಿಶೇಷ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಣೆ ವಿಚಾರವಾಗಿ ಕಾನೂನಿನ ಚೌಕಟ್ಟಿನಲ್ಲಿ ಏನು ಸಹಾಯ ಮಾಡಲು ಆಗುತ್ತದೆ ಅದನ್ನು ಮಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ವಿನಾಕಾರಣ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಶಾಂತಮ್ಮ ಎನ್ನುವ ಮಹಿಳೆ ಕಣ್ಣೀರು ಹಾಕಿ ಸಮಸ್ಯೆ, ಆದ ಅನ್ಯಾಯವನ್ನು ಹೇಳಿಕೊಂಡರು. ಮಹಿಳೆಯರ ಸಮಸ್ಯೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಶಾಂತವಾಗಿ ಆಲಿಸಿದರು. ಭೇಟಿಯಾದ ಮಹಿಳೆಯರ ತಲೆ ಮೇಲೆ ಕೈ ಇಟ್ಟು ನಿಮಗೆ ನ್ಯಾಯ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ನಂತರ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಹಿಳೆ ಶಾಂತಮ್ಮ ಹಾಗೂ ಇತರರು ಮಾತನಾಡಿ, ಮುಖ್ಯಮಂತ್ರಿಗಳು ನಮಗಾದ ಅನ್ಯಾಯವನ್ನು ಕೇಳಿಸಿಕೊಂಡಿದ್ದಾರೆ. ತಂದೆ ಸಮಾನರಾದ ಅವರು ನಮ್ಮ ತೆಲೆಯ ಮೇಲೆ ಕೈಯಿಟ್ಟು ನಿಮಗೆ ನ್ಯಾಯ ಒದಗಿಸುವುದಾಗಿ ತಿಳಿಸಿದ್ದಾರೆ ನಮಗೆ ಮುಖ್ಯಮಂತ್ರಿಗಲಿಂದ ನ್ಯಾಯ ದೊರೆಯುತ್ತದೆ ಎಂಬ ನಂಬಿಕೆ ನಮ್ಮಗೆ ಈಗ ಮೂಡಿದೆ ಎಂದರು.
ರಾಜ್ಯ ರೈತ ಹಾಗೂ ಮಹಿಳಾ ಸಂಘದ ರಾಜ್ಯಾಧ್ಯಕ್ಷ ಶಿವಪುತ್ರಪ್ಪ ಮಲ್ಲಾಡದ, ರಾವೀಂದ್ರಗೌಡ ಪಾಟೀಲ ಮಾತನಾಡಿ, ಅನ್ಯಾಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡಲಾಗುವುದು, ವಿನಾಕಾರಣ ಗರ್ಭಕೋಶ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯನನ್ನು ಕೆಲಸದಿಂದ ತಗೆಯುವವರೆಗೂ ಹಾಗೂ ಗರ್ಭಕೋಶ ತಗೆಸಿಕೊಂಡ ಮಹಿಳೆಯರಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮದವರು ಅನ್ಯಾಯಕ್ಕೆ ಒಳಗಾದ ಪ್ರತಿಯೊಬ್ಬ ಮಹಿಳೆಗೂ ೩ ಲಕ್ಷ ರೂಗಳನ್ನು ನೀಡಲು ಮುಂದಾಗಿದ್ದರೂ ಈ ಪರಿಹಾರದ ಮೊತ್ತವನ್ನು ತಪ್ಪಿಸುವ ಉದ್ದೇಶದಿಂದಲೇ ಪ್ರಮಾಣಪತ್ರವನ್ನು ನೀಡದ ಡಾ. ಪರಮೇಶ್ವರಪ್ಪ. ಆರ್.ಸಿ ಎನ್ನುವ ವೈದ್ಯರ ಮೇಲೆ ಸೀಖ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದರೆ ನ್ಯಾಯ ಸಿಗುವವರೆಗೂ ಹೋರಾಟವನ್ನು ಮಾಡಲಾಗುವುದು ಎಂದು ಹೇಳಿದರು.
ಸರ್ಕಾರ ವಿಶೇಷ ಪ್ಯಾಕೇಜ್ ನೀಡಿ ಪ್ರತಿಯೊಬ್ಬ ಮಹಿಳೆಗೂ ಪರಿಹಾರವನ್ನು ನೀಡಬೇಕು.ಈ ಹಿಂದೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮದಿಂದ ನೀಡಲು ಉದ್ದೇಶಿಸಿದ ೪೫.೬೬ ಕೋಟಿ ರೂಗಳನ್ನು ತಕ್ಷಣ ಬಿಡುಗಡೆ ಮಾಡಬೇಕು. ಆ ನಂತರದಲ್ಲಿ ಸರ್ಕಾರ ವಿಶೇಷ ಪ್ಯಾಕೇಜ್ ಮೂಲಕ ಹೆಚ್ಚಿನ ಪರಿಹಾರದ ಮೊತ್ತವನ್ನು ನೀಡಬೇಕೆಂದು ಸರ್ಕಾರವನ್ನು ಅವರು ಆಗ್ರಹಿಸಿದರು..
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹ್ಮದ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!