ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಂಡವಪುರ- ಜೆಡಿಎಸ್ ಶಾಸಕರನ್ನು ಟಾರ್ಗೆಟ್ ಮಾಡಿದರೆ ತಾನು ಹಿರೋ ಆಗ್ತೇನೆ ಎಂಬ ಭಾವನೆ ಸಂಸದೆ ಸುಮಲತಾ ಅವರದ್ದು. ಸುಮಲತಾ ಹೇಳಿದ ದಿನ ನಾನು ಮೇಲುಕೋಟೆಯಲ್ಲಿ ಆಣೆ ಮಾಡಲು ಸಿದ್ದನಿದ್ದೇನೆ ಎಂದು ಮೇಲುಕೋಟೆ ಸನ್ನಿಧಿಯಲ್ಲಿ ನಿಂತು ಶಾಸಕ ಪುಟ್ಟರಾಜು ಅವರು ಸಂಸದೆ ಸುಮಲತಾ ಸವಾಲು ಸ್ವೀಕರಿಸಿದರು.
ತಾಲೂಕಿನ ಮೇಲುಕೋಟೆಯಲ್ಲಿ ಶ್ರೀ ಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಅವರನ್ನು ಆಯ್ಕೆ ಮಾಡಿರುವುದು ಕೆಲಸ ಮಾಡಲು. ಅಂಬರೀಶ್ ಅವರ ಪತ್ನಿ ಎನ್ನುವ ಕಾರಣಕ್ಕೆ ಅವರು ಚುನಾವಣೆಯಲ್ಲಿ ಗೆದ್ದಿದ್ದಾರೆ ಅಷ್ಟೇ ಎಂದರು.
ಸುಮಲತಾರ ಟಾರ್ಗೆಟ್ ಜೆಡಿಎಸ್ : ನಮ್ಮ ಬಗ್ಗೆ ಮಾತನಾಡಿದರೆ ಹೀರೋ ಆಗುವ ಬಯಕೆ ಸುಮಲತಾರಿಗಿದೆ. ಮಾತನಾಡುವುದರಿಂದಲೇ ದೊಡ್ಡ ಲೀಡರ್ ಆಗುತ್ತೀನಿ ಅಂದು ಕೊಂಡಿದ್ರೆ ಅದನ್ನು ಮೊದಲು ಬಿಡಿ. ಗೌರವದಿಂದ ರಾಜಕಾರಣ ಮಾಡಿ. ಗಾಳಿಯಲ್ಲಿ ಗುಂಡು ಹೊಡೆಯುವ ಸಂಸ್ಕ್ರತಿ ನನ್ನದಲ್ಲ, ನೇರ ಎದೆಗೆ ಗುಂಡು ಹೊಡೆಯುವಂತದ್ದು ಎಂದು ತೀವ್ರ ವಾಗ್ದಾಳಿ ನಡೆಸಿದರು.
ನನ್ನ ವ್ಯಕ್ತಿತ್ವ ಅಂಬರೀಶ್ ಅವರಿಗೆ ಗೊತ್ತಿತ್ತು. ಕಡೇ ದೀಪಾವಳಿ ನಾನು ಅವರ ಜತೆ ಆಚರಿಸಿದ್ದೇನು. ಅಂಬರೀಶ್ ಹಾಗೂ ನನ್ನ ಸಂಬಂಧ ಎಂತದ್ದು ಅನ್ನೋದನ್ನಾ ರಾಕ್ಲೈನ್ ವೆಂಕಟೇಶ್ ಅವರನ್ನೇ ಕೇಳಿ. ನಮ್ಮ ಮನೆ ದುಡ್ಡು ಹಾಕಿ ಅಂಬರೀಶ್ ಅವರಿಗೆ ಚುನಾವಣೆ ಮಾಡಿದ್ದೆ. ಶಾಸಕನಾಗಿ ನಾನು ಸದನದಲ್ಲಿ ಯಾವ ರೀತಿ ಮಾತನಾಡಿದ್ದೇನೆ ಎಂಬುದನ್ನು ಇತಿಹಾಸ ತೆಗೆದು ನೋಡಲಿ ಎಂದರು.
ಮೂಡಾ ಕೇಸ್ನಲ್ಲಿ ನನ್ನ ವಿರುದ್ಧ ಷಡ್ಯಂತ್ರ : ಅಂಬರೀಶ್ ಕುಟುಂಬ ಸೇರಿದಂತೆ ಜಿಲ್ಲೆಯ ಎಲ್ಲಾ ರಾಜಕಾರಣಿಗಳು ಮೂಡಾ ನಿವೇಶನ ಪಡೆದಿದ್ದಾರೆ. ಈ ವಿಚಾರವಾಗಿ ನನ್ನ ವಿರುದ್ಧ ಕೋರ್ಟ್ ಕೇಸ್ ಇದೆ. ಜನಪ್ರತಿನಿಧಿಗಳ ನ್ಯಾಯಾಲಯ ಹೊರ ದೇಶಕ್ಕೆ ಹೋಗುವುದಾದರೆ ಅನುಮತಿ ಪಡೆಯುವಂತೆ ಹೇಳಿದೆ. ನನ್ನ ದಂತ ಚಿಕಿತ್ಸೆಗೆ ವಿದೇಶಕ್ಕೆ ಹೋಗಲು ಅನುಮತಿ ಕೇಳಿದ್ದೆ. ದಾಖಲೆಗಳಿದ್ರೆ ತರಲಿ, ಅವರ ವಿರುದ್ಧ ನಮ್ಮ ಬಳಿಯೂ ದಾಖಲೆಗಳಿವೆ. ಅವರ ಕುಟುಂಬವೂ ಮೂಡಾ ಸೈಟ್ ಪಡೆದಿದೆ ಅಲ್ವಾ.? ಚುನಾವಣೆ ಬಂದಾಗಲೆಲ್ಲಾ ಈ ಸೈಟ್ ವಿಚಾರ ತೆಗೆಯುತ್ತಾರೆ. ಇದು ನನ್ನ ವಿರುದ್ಧ ದೊಡ್ಡ ?ಡ್ಯಂತ್ರ ಎಂದರು.