ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯ ಆರತಕ್ಷತೆ ಸಂಭ್ರಮದಲ್ಲಿದ್ದ ಮದುಮಗ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಹೊನ್ನೂರಸ್ವಾಮಿ (26) ಮೃತ ಮದುಮಗ ಎಂದು ತಿಳಿದುಬಂದಿದೆ.
ಆರತಕ್ಷತೆ ಸಂಭ್ರಮದಲ್ಲಿದ್ದ ಮದುಮಗ ಹೊನ್ನೂರಸ್ವಾಮಿಗೆ ವೇದಿಕೆಯಲ್ಲಿರುವ ಸಂದರ್ಭ ಎದೆನೋವು ಕಾಣಿಸಿಕೊಂಡಿದೆ. ಆಗ ಎದೆನೋವು ತಾಳಲಾಗದೆ ಚಡಪಡಿಸಿದ್ದು, ಅಲ್ಲಿದ್ದವರು ಸಮೀಪದಲ್ಲಿನ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಮದುಮಗನನ್ನು ಪರೀಕ್ಷಿಸಿದ ವೈದ್ಯರು ಹೊಸಪೇಟೆಯಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಹೊನ್ನೂರುಸ್ವಾಮಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಬಳಿಕ ಹೊನ್ನೂರ ಸ್ವಾಮಿ ಅವರ ಮೃತದೇಹವನ್ನು ಗ್ರಾಮಕ್ಕೆ ತಂದು, ಇಂದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ