ಹಿಮದಿಂದ ಆವೃತವಾದ ಕೇದಾರನಾಥ: ಜಿಲ್ಲಾಡಳಿತದಿಂದ ಪ್ರಮುಖ ತೀರ್ಮಾನ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇದಾರನಾಥ ಯಾತ್ರೆಗೆ ತೆರಳುವ ಭಕ್ತರಿಗೆ ಋಷಿಕೇಶ ಮತ್ತು ಹರಿದ್ವಾರದಲ್ಲಿ ಲಭ್ಯವಿರುವ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಗರ್ವಾಲ್ ಹಿಮಾಲಯದ ಮೇಲ್ಭಾಗದಲ್ಲಿ ಮಳೆ ಮತ್ತು ಹಿಮದ ಕಾರಣ ಯಾತ್ರಿಕರ ನೋಂದಣಿಯನ್ನು ಏಪ್ರಿಲ್ 30 ರವರೆಗೆ ಸ್ಥಗಿತಗೊಳಿಸಲಾಗಿದೆ. ಹವಾಮಾನ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಯಾತ್ರೆಗಳ ಹೆಸರುಗಳ ನೋಂದಣಿ ಪ್ರಸ್ತುತ ನಡೆಯುತ್ತಿದೆ.

ಅಕ್ಷಯ ತೃತೀಯ ಶುಭ ಸಂದರ್ಭದಲ್ಲಿ ಚಾರ್ಧಾಮ ಯಾತ್ರೆ ಶನಿವಾರ ಆರಂಭವಾಯಿತು. ಯಾತ್ರೆಯ ಭಾಗವಾಗಿ ಯಮುನೋತ್ರಿ ಮತ್ತು ಗಂಗೋತ್ರಿ ದೇವಾಲಯಗಳನ್ನು ತೆರೆಯಲಾಯಿತು. ಗಂಗೋತ್ರಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಹೆಸರಿನಲ್ಲಿ ಮೊದಲ ಪೂಜೆ ನೆರವೇರಿಸಲಾಯಿತು. ದಮಿ ಖರ್ಸಾಲಿ ಗ್ರಾಮದಿಂದ ಮಾತಾ ಯಮುನಾದೇವಿ ಡೋಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಯಾತ್ರೆಗೆ ಚಾಲನೆ ನೀಡಿದರು.

ಭಾರೀ ಹಿಮದ ಕಾರಣ ಋಷಿಕೇಶ ಮತ್ತು ಹರಿದ್ವಾರದಲ್ಲಿ ಕೇದಾರನಾಥ ಯಾತ್ರೆಗೆ ಯಾತ್ರಾರ್ಥಿಗಳ ನೋಂದಣಿ ಪ್ರಕ್ರಿಯೆಯನ್ನು ಏಪ್ರಿಲ್ 30 ರವರೆಗೆ ನಿಲ್ಲಿಸಲಾಗಿದೆ ಎಂದು ಚಾರ್ಧಾಮ್ ಯಾತ್ರಾ ಆಡಳಿತ ಸಂಘಟಕ ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಸಿಂಗ್ ಕವಿರ್ಯಾಲ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಇದುವರೆಗೆ ಭಾರತ ಮತ್ತು ವಿದೇಶಗಳಿಂದ 16 ಲಕ್ಷ ಭಕ್ತರು ಚಾರ್ ಧಾಮ್ ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದಾರೆ.

ಭಾರತ ಮತ್ತು ವಿದೇಶಗಳಿಂದ ಬರುವ ಯಾತ್ರಾರ್ಥಿಗಳಿಗೆ ಉತ್ತರಾಖಂಡ ಸರ್ಕಾರವು ಮುನ್ನೆಚ್ಚರಿಕೆಗಳನ್ನು ಸೂಚಿಸಿದೆ. ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಪ್ರವಾಸವನ್ನು ಪ್ರಾರಂಭಿಸಲು ವಿನಂತಿಸಲಾಗಿದೆ. ಭಕ್ತರು ಸಾಧ್ಯವಾದಷ್ಟು ಬೆಚ್ಚಗಿನ ಬಟ್ಟೆಗಳನ್ನು ಒಯ್ಯಬೇಕು ಮತ್ತು ಪ್ರಯಾಣಿಕರು ಪ್ರಯಾಣದ ಸಮಯದಲ್ಲಿ ಪರ್ವತ ಹವಾಮಾನಕ್ಕೆ ಒಗ್ಗಿಕೊಳ್ಳಬೇಕು. ಉತ್ತರಾಖಂಡ ಸರ್ಕಾರವು ಭಕ್ತರಿಗೆ ಕಷ್ಟದ ಸಂದರ್ಭದಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಂಡು ನಂತರ ಪ್ರಯಾಣಿಸಲು ಸಲಹೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!