ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರಾಮೀಣ ಸೇವೆಯಿಂದ ಕಡ್ಡಾಯ ವೈದ್ಯರಿಗೆ ಸರ್ಕಾರ ರಿಲ್ಯಾಕ್ಸ್ ನೀಡಿದೆ.
ಸಿಎಂ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಕುರಿತು ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ.
ಕಡ್ಡಾಯ ಗ್ರಾಮೀಣ ಸೇವೆ ತಿದ್ದುಪಡಿ ಬಿಲ್ ಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಸುಗ್ರೀವಾಜ್ಞೆ ಮೂಲಕ ವಿಧೇಯಕಕ್ಕೆ ಅನುಮೋದನೆ ಪಡೆಯಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ವೈದ್ಯರಿಗೆ ಕಡ್ಡಾಯ ಗ್ರಾಮೀಣ ಸೇವೆ ನಿಯಮ ಬದಲಾವಣೆಗೆ ತೀರ್ಮಾನಿಸಲಾಗಿದೆ. ಖಾಲಿ ಹುದ್ದೆಗಳಿಗೆ ಅಗತ್ಯವಿರುವಷ್ಟು ಮಾತ್ರ ಕಡ್ಡಾಯ ಗ್ರಾಮೀಣ ಸೇವೆ ಇರಲಿದೆ ಎಂದು ಹೇಳಲಾಗಿದೆ.
ಅದೇ ರೀತಿ 2008-09ರಲ್ಲಿ ಗ್ರಾಮ ನ್ಯಾಯಾಲಯ ಸ್ಥಾಪನೆ ಬಗ್ಗೆ ಕಾನೂನು ತರಲಾಗಿತ್ತು. ಅದರಂತೆ 100 ಗ್ರಾಮ ನ್ಯಾಯಾಲಯಗಳ (Grama Nyayalayas) ಸ್ಥಾಪನೆಗೆ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ಮೂಲಕ ಅನುಮತಿ ನೀಡಿದೆ . 100 ಗ್ರಾಮ ಕೋರ್ಟ್ ಸ್ಥಾಪನೆಗೆ ಅಂದಾಜು 25-30 ಕೋಟಿ ಆಗಬಹುದು ಎಂದರು.
ಕೃಷಿ ತೋಟಾಗಾರಿಕೆ ನಷ್ಟ ಒಟ್ಟು 33,770 ಕೋಟಿ ರೂಪಾಯಿ ಆಗಿದ್ದು, ನಾವು ಕೃಷಿ ತೋಟಗಾರಿಕೆ ನಷ್ಟಕ್ಕೆ 4,414 ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದೇವೆ. 5,326 ಕೋಟಿ ರೂಪಾಯಿ ಒಟ್ಟು ನಷ್ಟ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ರಾಜ್ಯ ಮಂತ್ರಿಗಳು ಕೇಂದ್ರ ಮಂತ್ರಿಗಳ ಭೇಟಿ ಮಾಡುವುದಕ್ಕೆ ಪದೇ ಪದೇ ಸಮಯ ಕೇಳ್ತಿದ್ದಾರೆ ಎಂದು ಹೆಚ್ಕೆ ಪಾಟೀಲ್ ತಿಳಿಸಿದರು.
ಹೊಸದಾಗಿ 21 ತಾಲೂಗಳು ಬರಪೀಡಿತ ಘೋಷಣೆ
ನೈಋತ್ಯ ಮುಂಗಾರಿನಲ್ಲಿ ಮಳೆ ಕೊರತೆಯಿಂದ ಬರಗಾಲ ಘೋಷಣೆ ಮಾಡಲಾಗಿದೆ. 195 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿದ್ದೆವು. ಇದರ ಜೊತೆಗೆ 21 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಹೊಸದಾಗಿ 21 ತಾಲೂಕು ಬರಪೀಡಿತ ಎಂದು ಘೋಷಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ .
ಅನ್ನಭಾಗ್ಯದಲ್ಲಿ ಈಗಿರುವ ಪದ್ಧತಿ ಮುಂದುವರಿಸಲು ನಿರ್ಧಾರ
ಅಹಾರ ಇಲಾಖೆಯಿಂದ ಅಕ್ಕಿ ಒದಗಿಸುವ ವ್ಯವಸ್ಥೆ ಬಗ್ಗೆ ಚರ್ಚೆಯಾಗಿದೆ. ಈಗ ಇರುವ ಪದ್ಧತಿಯನ್ನೇ ಮುಂದುವರೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಐದು ಕೆಜಿ ಅಕ್ಕಿ ಕೊಡಬೇಕಾ ಅಥವಾ ನೀಡಲಾಗುತ್ತಿರುವ ಹಣ ಮುಂದುವರಿಸಬೇಕಾ ಎಂಬ ಚರ್ಚೆಯಾಗಿದೆ. ಸದ್ಯದ ಪದ್ದತಿಯನ್ನೇ ಮುಂದುವರಿಸಲು ಕ್ಯಾಬಿನೆಟ್ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.
ವಾಹನಗಳ ಸಿಎನ್ಜಿ, ಗೃಹ ಬಳಕೆಯ ಪಿಎನ್ಜಿ ಬಳಕೆಗೆ ರಾಜ್ಯ ಅನಿಲ ನೀತಿ ರೂಪಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ನೆಟ್ವರ್ಕ್ ಪಾಲಿಸಿಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ವಿವಿಧ ತೀರ್ಮಾನಗಳು:
- ಲಿಂಗತ್ವ ಅಲ್ಪಸಂಖ್ಯಾತರಿಗೂ ಗೃಹಲಕ್ಷ್ಮೀ ಯೋಜನೆ ವಿಸ್ತರಣೆ
- ಕೃಷಿ ಇಲಾಖೆಯಿಂದ ರಸಗೊಬ್ಬರ ದಾಸ್ತಾನಿಗೆ 200 ಕೋಟಿ ರೂ ಬಂಡವಾಳ ಸಾಲ ತೆಗೆದುಕೊಳ್ಳಲು ಸರ್ಕಾರಿ ಖಾತರಿಗೆ ಅನುಮತಿ
- ಪೊಲೀಸ್ ತರಬೇತಿ ಶಾಲೆಗಳ ಬಲವರ್ಧನೆ ಗೆ ಅಗತ್ಯ ಸಾಮಾಗ್ರಿ ಒದಗಿಸಲು 20 ಕೋಟಿ ಆಡಳಿತಾತ್ಮಕ ಅನುಮೋದನೆ
- ಬೆಳಗಾವಿಯ ಸುವರ್ಣಸೌಧದಲ್ಲೇ ಅಧಿವೇಶನ ನಡೆಸುವ ಬಗ್ಗೆ ಚರ್ಚೆ, ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡುವ ಅಧಿಕಾರ ಸಿಎಂ ವಿವೇಚನೆಗೆ
- ನಗರಾಭಿವೃದ್ಧಿ ಇಲಾಖೆಯಿಂದ ಎನ್.ಜಿ.ಟಿ ಅನುಸರಣೆಗೆ ತ್ವರಿತ ಪರಿಸರ ಪರಿಹಾರ ನಿಧಿ ಅಡಿಯಲ್ಲಿ 400.24 ಕೋಟಿ ವೆಚ್ಚದಲ್ಲಿ 110 ಮಲ ತ್ಯಾಜ್ಯ ಸಂಸ್ಕರಣ ಘಟಕಗಳನ್ನು ಸ್ಥಾಪನೆ ಮಾಡಲು ಕ್ಯಾಬಿನೆಟ್ ಅನುಮೋದನೆ.
- 40 ಕೋಟಿ ಅಂದಾಜು ವೆಚ್ಚದಲ್ಲಿ ಸೆಸ್ ಪೂಲ್ ವೆಹಿಕಲ್ ಖರೀದಿಗೆ ಅನುಮೋದನೆ.
- ಕೃಷಿ ಇಲಾಖೆಯಿಂದ ರಸಗೊಬ್ಬರ ದಾಸ್ತಾನಿಗೆ ೨೦೦ ಕೋಟಿ ರೂ ಬಂಡವಾಳ ಸಾಲ ತೆಗೆದುಕೊಳ್ಳಲು ಸರ್ಕಾರಿ ಖಾತರಿಗೆ ಅನುಮತಿ.