ಹೊಸ ದಿಗಂತ ಡಿಜಿಟಲ್ ಡೆಸ್ಕ್
“ಅಸ್ಸಾಂ ರಾಜ್ಯದಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ‘ಅಲ್ಪಸಂಖ್ಯಾತ’ ಸಮುದಾಯ ಯಾವುದು ಎಂಬುದು ಬದಲಾಗುತ್ತದೆ. ಅಲ್ಪಸಂಖ್ಯಾತರು ಯಾರೆಂಬ ಬಗ್ಗೆ ಸುಪ್ರೀಕೋರ್ಟ್ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಅಸ್ಸಾಂನ ವಾಸ್ತವಿಕ ಚಿತ್ರಣವನ್ನು ಗಮನಕ್ಕೆ ತೆಗೆದುಕೊಳ್ಳಬೇಕೆಂದು ನಾವು ಕೇಳಿಕೊಳ್ಳುತ್ತೇವೆ. ನಮ್ಮ ದಾವೆ ಇರುವುದು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರುತಿಸುವಲ್ಲಿ..” ಹೀಗೆಂದು ಅಸ್ಸಾಂ ವಿಧಾನಸಭೆಯಲ್ಲಿ ಹೇಳುವ ಮೂಲಕ ಹೊಸ ವಿಚಾರಾಭಿಯಾನಕ್ಕೆ ಕಿಡಿ ಹೊತ್ತಿಸಿದ್ದಾರೆ ಅಲ್ಲಿನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ.
ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಹಿಂದುಗಳೇ ಅಲ್ಪಸಂಖ್ಯಾತರಾಗಿದ್ದಾರೆ, ಹೀಗಿರುವಾಗ ಅಲ್ಪಸಂಖ್ಯಾತರಿಗೆಂದು ಇರುವ ಯೋಜನೆಗಳು ಆ ಜಿಲ್ಲೆಗಳಲ್ಲಿ ಬಹುಸಂಖ್ಯಾತರಾಗಿರುವ ಇತರ ಧರ್ಮದವರಿಗೆ ಹೋಗುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಮುಖ್ಯಮಂತ್ರಿ ಹಿಮಂತ ಅವರು ಇತ್ತೀಚಿನ ದಿನಗಳಲ್ಲಿ ಮಾಧ್ಯಮದ ಮುಂದೆ ಎತ್ತಿದ್ದರು.
ಇದೀಗ ಈ ಸಮಸ್ಯೆಯ ಬಗ್ಗೆ ಸದನದಲ್ಲೂ ಮಾತನಾಡಿರುವ ಇವರು, ಹಲವು ಉದಾಹರಣೆಗಳನ್ನು ನೀಡಿ, ಸುಪ್ರೀಂಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸುವಾಗ ತಮ್ಮ ಅಭಿಪ್ರಾಯವನ್ನೂ ದಾಖಲಿಸುವುದಾಗಿ ಹೇಳಿದ್ದಾರೆ.
ಅವರು ಸದನದಲ್ಲಿ ಎತ್ತಿರುವ ಪ್ರಶ್ನೆಗಳು ಹೀಗಿವೆ-
- ಎಸ್ಟಿ ವಿದ್ಯಾರ್ಥಿವೇತನವನ್ನು ಪಡೆದವರೇ ಅಲ್ಪಸಂಖ್ಯಾತ ಹಾಗೂ ಒಬಿಸಿ ವಿದ್ಯಾರ್ಥಿವೇತನಗಳನ್ನೂ ಪಡೆದಿರುವ ಉದಾಹರಣೆ ಇದೆ.
- ಸಂಖ್ಯೆಗಳ ಲೆಕ್ಕದಲ್ಲಿ ಇವತ್ತು ರೆಂಗ್ಮಾ ಮತ್ತು ಕುಕಿ ಜನಾಂಗದವರೇ ಅಲ್ಪಸಂಖ್ಯಾತರಾಗಿದ್ದಾರೆ.
- ಅಸ್ಸಾಮಿನ ಚಹಾ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಹಲವರು ಇತರೆ ಹಿಂದುಳಿದ ವರ್ಗಗಳ ಪ್ರಮಾಣಪತ್ರ ಹೊಂದಿದ್ದಾರೆ. ಆದರೆ ಅಲ್ಪಸಂಖ್ಯಾತರ ಲೆಕ್ಕದಲ್ಲಿ ಕ್ರೈಸ್ತರಿಗೆ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ.