ಹೊಸದಿಗಂತ ವರದಿ ಕುಶಾಲನಗರ :
ನಿವೃತ್ತ ಅರಣ್ಯಾಧಿಕಾರಿಯೊಬ್ಬರು ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಸವನತ್ತೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ, ನಿವೃತ್ತ ಅರಣ್ಯಾಧಿಕಾರಿ ಶಶಿಧರ್ ಎಂಬವರೇ (69) ಬುಧವಾರ ರಿವಾಲ್ವರ್ ನಿಂದ ಹಣೆಗೆ ಗುಂಡು ಹೊಡೆದುಕೊಂಡು ಸಾವಿಗೆ ಶರಣಾದವರಾಗಿದ್ದಾರೆ.
ಬುಧವಾರ ಮುಂಜಾನೆ 6 ಗಂಟೆಯ ಸಮಯದಲ್ಲಿ ತಮ್ಮ ವಾಸದ ಮನೆಯ ಮಲಗುವ ಕೋಣೆಯಲ್ಲಿ ಹಾಸಿಗೆ ಮೇಲೆ ಪತ್ರವೊಂದನ್ನು ಪೊಲೀಸರಿಗೆ ಬರೆದಿಟ್ಟಿರುವ ಶಶಿಧರ್, ನಾನು ನಿದ್ರಾಹೀನತೆಯಿಂದ ಬಳಲುತ್ತಿರುವ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಮಕ್ಕಳಿಗೆ ತೊಂದರೆ ಕೊಡಬೇಡಿ ಎಂದು ವಿನಂತಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.