ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರದ ಜೊತೆಗೆ ಕಡಲು ಕೂಡಾ ಘರ್ಜಿಸುತ್ತಿದ್ದು, ಕಡಲ ತೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆಗಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಗೃಹರಕ್ಷಕ ದಳದ ಪರಿಣಿತ 26 ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ.
ಈ ಸಿಬ್ಬಂದಿಗಳು ಈಜು ಪರಿಣತರಾಗಿದ್ದು, ಜೊತೆಗೆ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆಯೂ ತರಬೇತಿ ಪಡೆದಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ, ಉಳ್ಳಾಲ, ತಣ್ಣೀರು ಬಾವಿ, ಸುರತ್ಕಲ್, ಸಸಿಹಿತ್ಲು ಸಹಿತ ಪ್ರಮುಖ ಎಂಟು ಸಮುದ್ರ ತೀರಗಳಲ್ಲಿ ಈ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಇವರು ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಎರಡು ಹಂತದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಕಡಲ ತೀರಕ್ಕೆ ಆಗಮಿಸುವ ವಿವಿಧ ಊರುಗಳ ಪ್ರವಾಸಿಗರಿಗೆ ಇಲ್ಲಿನ ಅಪಾಯದ ಅರಿವಿಲ್ಲದೆ ಅಲೆಗಳೊಂದಿಗೆ ಆಟವಾಡಲು ತೆರಳಿ ಅಪಾಯ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿದ ಸೂಚನೆಯಂತೆ ಈ ಕ್ರಮಕ್ಕೆ ಗೃಹರಕ್ಷಕ ಇಲಾಖೆ ಮುಂದಾಗಿದೆ