ಹರಸದೇ ಹೋಯ್ತು ರೋಹಿಣಿ ಮಳೆ- ಬಿತ್ತನೆಗಾಗಿ ಹೀಗಿವೆ ನಿರೀಕ್ಷೆ-ಸಿದ್ಧತೆ

– ಪರಶುರಾಮ ಶಿವಶರಣ
ವಿಜಯಪುರ: ಜಿಲ್ಲೆಯಲ್ಲಿ ಮುಂಗಾರು ಮೊದಲ ಮಳೆ ರೋಹಿಣಿ ಕೈಕೊಟ್ಟಿದ್ದು, ಬಿತ್ತನೆಗೆ ಸಿದ್ಧತೆ ಮಾಡಿಕೊಂಡ ರೈತ ವರ್ಗ ಇನ್ನು ಮೃಗಶಿರ ಮಳೆಯತ್ತ ಮುಗಿಲು ನೋಡುವಂತಾಗಿದೆ.
ಮುಂಗಾರಿನ ಮೊದಲ ಮಳೆ ರೋಹಿಣಿ ಸಮರ್ಪಕವಾಗಿ ಜಿಲ್ಲೆಯಲ್ಲಿ ಸುರಿದಿದ್ದರೆ, ಹೆಸರು, ಮುಕಣಿ, ಉದ್ದು, ಸಜ್ಜೆ ಬಿತ್ತನೆ ಕಾರ್ಯ ಜೋರಾಗಿ ನಡೆಯುತ್ತಿತ್ತು. ಆದರೆ ರೋಹಿಣಿ ಮಳೆ ಬಾರದ ಹಿನ್ನೆಲೆ ಕಾಳು, ಕಡಿ ಬೆಳೆ ಬಿತ್ತನೆಗೆ ಹಿನ್ನೆಡೆಯಾಗಿದ್ದು, ಇನ್ನೇನಿದ್ದರೂ ಜೂ. 7 ರಂದು ಕೂಡುವ ಮೃಗಶಿರ ಮಳೆಯತ್ತ ಮುಖಮಾಡುವಂತಾಗಿದೆ.
ಮುಂಗಾರು ಮಾರುತ ಇನ್ನು ನಾಲ್ಕೈದು ದಿನ ತಡವಾಗಿ ಆರಂಭಗೊಳ್ಳುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಪ್ರಸಕ್ತ ವರ್ಷದ ಮುಂಗಾರು ಕೈ ಹಿಡಿಯುತ್ತದೆ ಎನ್ನುವ ಆಶಾಭಾವದಲ್ಲಿ ರೈತರಿದ್ದಾರೆ.

ಆರಂಭಗೊಳ್ಳದ ಬಿತ್ತನೆ ಕಾರ್ಯ:

ರೈತ ವರ್ಗ ಸದ್ಯ ಭೂಮಿ ಹದಮಾಡಿ, ಬಿತ್ತನೆಗೆ ಸಿದ್ಧತೆಯನ್ನು ಮಾಡಿಕೊಂಡಿದೆ. ಒಂದೆರೆಡು ಮಳೆಯಾದಲ್ಲಿ ಬಿತ್ತನೆ ಕಾರ್ಯ ಚುರುಕು ಪಡೆದುಕೊಳ್ಳಲಿದೆ. ಆದರೆ ಜಿಲ್ಲೆಯಲ್ಲಿ ಬಿರು ಬಿಸಿಲಿನ ವಾತಾವರಣ ಮುಂದುವರೆದಿದ್ದು, ಬಿತ್ತನೆಗೆ ಬೇಕಾದಂತಹ ಭೂಮಿ ತೇವಾಂಶಗೊಂಡಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಇನ್ನು ಬಿತ್ತನೆ ಕಾರ್ಯ ಆರಂಭಗೊಂಡಿಲ್ಲ ಎಂದು ರೈತರು ಹೇಳುತ್ತಾರೆ.

7.36 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ:

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 7,36,794 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಈ ಪೈಕಿ ವಿಜಯಪುರ ತಾಲೂಕಿನಲ್ಲಿ 1,65,330 ಹೆಕ್ಟೇರ್, ಬಸವನಬಾಗೇವಾಡಿ 1,17,417 ಹೆಕ್ಟೇರ್, ಇಂಡಿ 1,64,178 ಹೆಕ್ಟೇರ್, ಮುದ್ದೇಬಿಹಾಳ 1,11,401 ಹೆಕ್ಟೇರ್, ಸಿಂದಗಿ 1,78,468 ಹೆಕ್ಟೇರ್ ಪ್ರದೇಶ ಬಿತ್ತನೆ ಮಾಡಲಾಗುತ್ತದೆ. ಪ್ರಸಕ್ತ ವರ್ಷ ತೊಗರಿ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ, ಹತ್ತಿ ಸೇರಿದಂತೆ ಹಲವು ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ.

ಬೀಜ, ಗೊಬ್ಬರ ದಾಸ್ತಾನು:

ಮುಂಗಾರು ಬಿತ್ತನೆಗೆ ಬೇಕಾದ ಬೀಜ ಹಾಗೂ ಗೊಬ್ಬರಗಳನ್ನು ಈಗಾಗಲೇ ದಾಸ್ತಾನು ಮಾಡಲಾಗಿದ್ದು, ತೊಗರಿ 9,200 ಕ್ವಿಂಟಾಲ್, ಮೆಕ್ಕೆಜೋಳ 905 ಕ್ವಿಂಟಾಲ್, ಹೆಸರು 23 ಕ್ವಿಂಟಾಲ್, ಸಜ್ಜೆ 39 ಕ್ವಿಂಟಾಲ್, ಸೂರ್ಯಕಾಂತಿ 36 ಕ್ವಿಂಟಾಲ್ ದಾಸ್ತಾನು ಹೊಂದಲಾಗಿದೆ.

ಇನ್ನು ಯೂರಿಯಾ ಗೊಬ್ಬರ 32,746 ಟನ್, ಡಿಎಪಿ 14,452 ಟನ್, ಕಾಂಪ್ಲೆಕ್ಸ್ 37,0002 ಟನ್, ಎಂಒಪಿ ರಸಗೊಬ್ಬರ 698 ಟನ್, ಎಸ್‌ಎಪಿ ರಸಗೊಬ್ಬರ 32,746 ಟನ್ ಸೇರಿದಂತೆ 88,738 ಟನ್ ರಸಗೊಬ್ಬರ ದಾಸ್ತಾನು ಹೊಂದಲಾಗಿದ್ದು, ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬೀಜ ಹಾಗೂ ಗೊಬ್ಬರವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!