ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಳಿಗಾಲ ಬಂತೆಂದರೆ ಸಾಕು ದೆಹಲಿ ನಿವಾಸಿಗಳಿಗೆ ಭಯ ಶುರುವಾಗುತ್ತೆದೆ. ಕಾರಣ ಈ ಋತುವಿನಲ್ಲಿ ವಾಯು ಮಾಲಿನ್ಯ ಹೆಚ್ಚಾಗಿ ಶುದ್ಧ ಗಾಳಿ ಸಿಗುವುದೂ ಕಷ್ಟವಾಗುತ್ತದೆ. ಹೆಚ್ಚುತ್ತಿರುವ ಹೊಗೆ ಕೂಡ ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಇದರ ಜೊತೆಗೆ, ಪ್ರತಿ ವರ್ಷ ಈ ಋತುವಿನಲ್ಲಿ ಸಮೀಪದ ಪ್ರದೇಶಗಳಲ್ಲಿ ರೈತರು ತಮ್ಮ ಹೊಲಗಳನ್ನು ಸುಡುವುದು ಮತ್ತೊಂದು ದೊಡ್ಡ ಸಮಸ್ಯೆ.
ಕಟಾವು ಮುಗಿದ ನಂತರ ಹೊಲಗಳಲ್ಲಿ ಉಳಿದ ಹುಲ್ಲು ಮತ್ತು ತೆನೆಯನ್ನು ಯಂತ್ರ ಅಥವಾ ಕೂಲಿ ಕಾರ್ಮಿಕರಿಂದ ತೆಗೆಯುವುದು ಆರ್ಥಿಕ ಹೊರೆ ಎಂದು ಭಾವಿಸಿರುವ ರೈತರು ಬೆಂಕಿ ಹಚ್ಚುತ್ತಾರೆ. ಒಂದಲ್ಲಾ ಎರಡಲ್ಲಾ ನೂರಾರು ಎಕರೆ ಗದ್ದೆಯಲ್ಲಿನ ಹುಲ್ಲು ಸುಟ್ಟು ಕರಕಲಾಗಿ, ಅವುಗಳಿಂದ ಹೊರಸೂಸುವ ಹೊಗೆ ಮತ್ತು ವಿಷಕಾರಿ ಅನಿಲಗಳು ದೆಹಲಿ ಮತ್ತು ಸುತ್ತಮುತ್ತಲಿನ ಜನರ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ.
ಜೊತೆಗೆ ವಾಹನಗಳು ಮತ್ತು ಕೈಗಾರಿಕೆಗಳ ಮಾಲಿನ್ಯ ಬಳಲುತ್ತಿರುವ ದೆಹಲಿಯ ಜನರನ್ನು ಮತ್ತಷ್ಟು ತೊಂದರೆಗೊಳಿಸುತ್ತದೆ. ಹೀಗಾಗಿ ರೈತರ ಹೊಲಗಳಿಗೆ ಬೆಂಕಿ ಬೀಳದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ. ಗುರುಗ್ರಾಮದ ರೈತರು ಹೊಲ ಸುಟ್ಟರೆ ಎಕರೆಗೆ 2,500 ರೂಪಾಯಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮತ್ತೊಂದು ಶಾಕಿಂಗ್ ಸಂಗತಿ ಏನಂದ್ರೆ ಪಂಜಾಬ್ನಲ್ಲಿ ಈ ವರ್ಷ ಹೊಲಗಳಿಗೆ ಬೆಂಕಿ ಇಟ್ಟ ಪ್ರಕರಣಗಳೂ 700ಕ್ಕೂ ಅಧಿಕ ಎಂದು ಅಲ್ಲಿನ ಕೃಷಿ ಸಚಿವ ದಿಗ್ಬ್ರಾಂತಿ ವ್ತಕ್ತಪಡಿಸಿದರು.
ಗ್ರಾಮ ಮಟ್ಟದಲ್ಲಿ ಇದನ್ನು ತಡೆಯಲು ಸಮಿತಿಗಳನ್ನೂ ರಚಿಸಲಾಗಿದೆ.ಹೊಲಗಳಲ್ಲಿ ಉಳಿದ ಹುಲ್ಲು, ಭತ್ತ ಕಟಾವು ಮಾಡಲು ಬಳಸುವ ಯಂತ್ರೋಪಕರಣಗಳಿಗೆ ಶೇ.50ರಷ್ಟು ರಿಯಾಯಿತಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ರೈತ ಸಂಘಗಳಿಗೆ ಶೇ.80 ವರೆಗೆ ಸಹಾಯಧನ ನೀಡುತ್ತಿದೆ ಅಧಿಕಾರಿಗಳು ತಿಳಿಸಿದ್ದಾರೆ. ರೈತರು ತಮ್ಮ ಹೊಲಗಳನ್ನು ಸುಡಬಾರದು, ಇದರಿಂದ ಪರಿಸರ ಹಾಳಾಗುತ್ತದೆ, ವನ್ಯಜೀವಿಗಳು, ಮರಗಳು, ಪ್ರಕೃತಿ ಮತ್ತು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧಿಕಾರಿಗಳು ತಿಳಿ ಹೇಳಿದ್ದಾರೆ.