ಇಮಾಮ್‌ ಇಲ್ಯಾಸಿಯನ್ನು ಭೇಟಿ ಮಾಡಿದ ಆರೆಸ್ಸೆಸ್‌ ಸರಸಂಘ ಚಾಲಕ ಮೋಹನ್‌ ಭಾಗ್ವತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ‌

ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರೆಸ್ಸೆಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರು ಇಂದು ದೆಹಲಿಯ ಕಸ್ತೂರಬಾ ಗಾಂಧಿ ಮಾರ್ಗದಲ್ಲಿರುವ ಮಸೀದಿಯಲ್ಲಿ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ನ ಮುಖ್ಯಸ್ಥ ಡಾ.ಇಮಾಮ್ ಉಮೆರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿ ಮಾಡಿದರು.‌

ಈ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್ ಮಾತನಾಡಿದ್ದು “ಇಲ್ಯಾಸಿ ಅವರು ಸರಸಂಘಚಾಲಕರಿಗೆ ಬಹಳ ಹಿಂದೆಯೇ ಆಹ್ವಾನ ನೀಡಿದ್ದರು. ಸಮಾಜ ಜೀವನದ ವಿವಿಧ ಸ್ಥರದಲ್ಲಿನ ಭಿನ್ನ ಜನರನ್ನು ನಿರಂತರವಾಗಿ ಅವರು ಭೇಟಿಯಾಗುತ್ತಾರೆ. ಇದು ಕೂಡ ಅದೇ ರೀತಿಯ ‘ಸಂವಾದ’ ಪ್ರಕ್ರಿಯೆಯ ಒಂದು ಭಾಗ” ಎಂದು ಹೇಳಿದ್ದಾರೆ.

ಮೋಹನ್‌ ಭಾಗ್ವತ್‌ ಭೇಟಿಯ ನಂತರ ಇಲ್ಯಾಸಿಯವರು ಈ ಭೇಟಿಯ ಕುರಿತು ಮಾತನಾಡಿದ್ದು “ಮೋಹನ್ ಭಾಗವತ್ ಅವರು ಭೇಟಿ ನೀಡಿರುವುದು ನಮ್ಮ ಸೌಭಾಗ್ಯ. ಭಾಗವತ್ ಅವರು ಇಮಾಮ್ ಹೌಸ್ ಭೇಟಿಗಾಗಿ ಬಂದಿದ್ದರು. ಅವರೊಬ್ಬ ರಾಷ್ಟ್ರ ಋಷಿ. ದೇಶದಲ್ಲಿ ಏಕತೆ ಮತ್ತು ನಿಷ್ಠೆ ಪಾಲನೆಯಾಗಬೇಕಿದೆ. ನಾವೆಲ್ಲ ಭಿನ್ನ ರೀತಿಯ ಉಪಾಸನಾ ಪದ್ಧತಿಗಳನ್ನು ಪಾಲಿಸುತ್ತೇವೆ, ಆದರೆ ಅದೆಲ್ಲದಕ್ಕಿಂತ ಮೊದಲು ನಾವು ಮನುಷ್ಯರು. ನಾವು ಭಾರತದಲ್ಲಿ ಜೀವಿಸುತ್ತಿದ್ದೇವೆ, ನಾವು ಭಾರತೀಯರು. ಭಾರತ ವಿಶ್ವ ಗುರುವಾಗುವ ಹೊಸ್ತಿಲಲ್ಲಿದೆ, ಅದಕ್ಕಾಗಿ ನಾವು ಶ್ರಮಪಡಬೇಕಿದೆ” ಎಂದರು.

ಉಮರ್ ಇಲ್ಯಾಸಿಯ ಸಹೋದರ ಸುಹೈಬ್ ಇಲ್ಯಾಸಿ ಮಾತನಾಡಿ, ”ನಮ್ಮ ತಂದೆಯವರು ಸಂಘದೊಂದಿಗೆ ಬಹಳ ಹಳೆಯ ನಂಟು ಹೊಂದಿದ್ದರು.ಮೋಹನ್ ಭಾಗವತ್ ಅವರು ನಮ್ಮ ತಂದೆಯವರಾದ ಜಮೀಲ್ ಇಲ್ಯಾಸಿಯವರ ಪುಣ್ಯಸ್ಮರಣೆಯ ಸಲುವಾಗಿ ಮಸೀದಿಗೆ ಬಂದಿದ್ದರು. ಇದೊಂದು ಕುಟುಂಬದ ಖಾಸಗಿ ಕಾರ್ಯಕ್ರಮ, ಅದನ್ನು ಆ ದೃಷ್ಟಿಯಿಂದಲೇ ನೋಡಬೇಕಿದೆ ಹಾಗು ಭಾಗವತ್ ಅವರು ಮುಸಲ್ಮಾನ ವಿಚಾರವಂತರ ಜೊತೆ ಸಾಮಾಜಿಕ ಸಾಮರಸ್ಯದ ಕುರಿತಾಗಿ ಆಳವಾದ ಚರ್ಚೆಯನ್ನೂ ನಡೆಸಿದ್ದಾರೆ” ಎಂದರು.

ಭಾಗವತ್ ಅವರು ಮುಸಲ್ಮಾನ ಸಮುದಾಯದೊಂದಿಗೆ ಈ ಹಿಂದೆಯೂ ಆತ್ಮೀಯ ನಂಟು ಹೊಂದಿದ್ದು ಆಗಸ್ಟ್‌ ತಿಂಗಳಲ್ಲಿ ಇಲ್ಯಾಸಿಯವರನ್ನು ಭೇಟಿ ಮಾಡಿದ್ದರು. ಅಲ್ಲದೆ ಅಂದು ಮಾಜಿ ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದ ಎಸ್ವೈ ಖುರೇಶಿ, ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಜ಼ಮೀರ್ ಉದ್ದೀನ್ ಷಾ, ಮಾಜಿ ಸಂಸದ ಶಹೀದ್ ಸಿದ್ದಿಕಿ ಮತ್ತು ಸಮಾಜ ಸೇವಕರೂ ಉದ್ಯಮಿಗಳೂ ಆದ ಸಯೀದ್ ಶೇರ್ವಾನಿ ಅವರನ್ನು ಭೇಟಿ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!