ಹೊಸದಿಗಂತ ವರದಿ, ಗದಗ:
ಇತ್ತೀಚಿಗೆ ಆರ್ಟಿಓ ಆಪೀಸ್ನಲ್ಲಿ ಏಜೆಂಟನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಕೊಲೆಯ ಪ್ರಕರಣದಲ್ಲಿ ಪೊಲೀಸರು ಓರ್ವನನ್ನು ಬಂಧಿಸಿ ಪ್ರಕರಣವನ್ನು ಬೇಧಿಸಿದ್ದಾರೆ.
ನಗರದ ನಿವಾಸಿ ಮಾರುತಿ ಅಂಕಲಗಿ (35) ವರ್ಷ ಎಂಬುವನು ಆರ್ಟಿಓ ಕಚೇರಿಯಲ್ಲಿ ಎಜೆಂಟನಾಗಿ ಕೆಲಸ ಮಾಡುತ್ತಿದ್ದನು. ಅವನ್ನು ಡ.ಸ. ರಾಮೇನಹಳ್ಳಿ ಹಾಗೂ ಜಂತ್ಲಿ ಶಿರೂರ ಗ್ರಾಮದ ರಸ್ತೆಯಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡ.ಸ. ರಾಮೇನಹಳ್ಳಿಯ ಕೂಲಿ ಕಾರ್ಮಿಕ ಮುತ್ತಪ್ಪ ಬೆಟಗೇರಿ ಎಂಬ ಆರೋಪಿಯನ್ನು ಬಂಧಿಸಲಾಗಿದೆ.
ಘಟನೆಯ ವಿವಿರ : ಮೃತ ವ್ಯಕ್ತಿ ಆರೋಪಿ ಮುತ್ತಪ್ಪ ಬೆಟಗೇರಿ ಅವನಿಂದ 1.60 ಲಕ್ಷ ರೂ.ಗಳನ್ನು ಪಡೆದಿದ್ದ ಎನ್ನಲಾಗಿದ್ದು ಈ ಬಗ್ಗೆ ಪದೇ ಪದೇ ಕೇಳಿದರೂ ಹಣವನ್ನು ನೀಡಿರಲಿಲ್ಲ ಅದೇರೀತಿ ಮೃತ ವ್ಯಕ್ತಿ ಆ.24 ರಂದು ಕಪ್ಪತಗುಡ್ಡಕ್ಕೆ ಬರುತ್ತಿರುವದಾಗಿ ಆರೋಪಿಗೆ ಪೋನ್ ಮಾಡಿ ತಿಳಿಸಿದ್ದು ಅದರಂತೆ ಗದಗದಿಂದ ಡಂಬಳಗೆ ಬಂದ ಮೃತವ್ಯಕ್ತಿಯನ್ನು ಆರೋಪಿ ತನ್ನ ಮೋಟರ್ಸೈಕಲ್ನಲ್ಲಿ ಕರೆದುಕೊಂಡು ಕಪ್ಪತಗುಡ್ಡಕ್ಕೆ ಹೋಗದೆ ಅಲ್ಲಲ್ಲಿ ತಿರುಗಾಡಿ ನಂತರ ತನ್ನ ಹೊಲಕ್ಕೆ ಕರೆದುಕೊಂಡು ಬಂದು ಅಲ್ಲಿ ಇಬ್ಬರು ಸರಾಯಿ ಕುಡಿಯುತ್ತಿರುವ ಸಂದರ್ಭದಲ್ಲಿ ಆರೋಪಿಯು ತನ್ನ ಹಣ ಕೊಡುವಂತೆ ಮೃತನಿಗೆ ಹೇಳಿದ್ದಾನೆ. ನಾನು ನಿನಗೆ ಹಣ ಕೊಡುವದಿಲ್ಲ ಏನು ಮಾಡಿಕೊಳ್ಳುತ್ತಿಯಾ ಎಂದು ಮಾತಿನ ಚಕಮಕಿ ನಡೆದ ಸಂದರ್ಭದಲ್ಲಿ ಆರೋಪಿಯು ವಸ್ತ್ರದಲ್ಲಿ ಕಲ್ಲನ್ನು ಕಟ್ಟಿ ಮೃತ ವ್ಯಕ್ತಿಯ ತಲೆಗೆ, ಮುಖಕ್ಕೆ ಹೊಡೆದು ಕೊಲೆ ಮಾಡಿರುವದಾಗಿ ಆರೋಪಿ ಮುತ್ತಪ್ಪ ಬೆಟಗೇರಿ ಅವನು ಒಪ್ಪಿಕೊಂಡಿರುತ್ತಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರು ತಿಳಿಸಿದ್ದಾರೆ ಹಾಗೂ ಪ್ರಕರಣ ಬೇಧಿಸಿದ ಮುಂಡರಗಿ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಅಭಿನಂಧಿಸಿದ್ದಾರೆ.