ಹೊಸದಿಗಂತ ಡಿಜಿಟಲ್ ಡೆಸ್ಕ್:
ನೂಪುರ್ ಶರ್ಮಾ ಹೇಳಿಕೆಯ ಕುರಿತಾಗಿ ಸುಪ್ರಿಂ ಕೋರ್ಟ್ ಕಟುವಾಗಿ ಟಿಪ್ಪಣಿ ಮಾಡಿರುವ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು “ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿರುವುದಕ್ಕೆ ಅಧಿಕಾರದಲ್ಲಿರುವ ಪಕ್ಷ ತಲೆ ತಗ್ಗಿಸಬೇಕು” ಎಂದಿದ್ದಾರೆ.
ಈ ಕುರಿತು ವಯನಾಡಿನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು “ಪ್ರಸ್ತುತ ದೇಶದಲ್ಲಿರುವ ವಾತಾವರಣಕ್ಕೆ ಆಡಳಿತದಲ್ಲಿರುವ ಪಕ್ಷವೇ ಕಾರಣ. ಇಂತಹ ವಾತಾವರಣ ಸೃಷ್ಟಿಯ ಹಿಂದೆ ಬಿಜೆಪಿ, ಆರೆಸ್ಸೆಸ್ ಕೈವಾಡವಿದೆ. ಈ ದ್ವೇಷದ ವಾತಾವರಣ ಸೃಷ್ಟಿಗೆ ಪ್ರಧಾನಿ, ಗೃಹಮಂತ್ರಿ, ಮತ್ತು ಆಡಳಿತದಲ್ಲಿರುವ ಎಲ್ಲರೂ ನೇರ ಹೊಣೆಗಾರರು” ಎಂದು ಆರೋಪಿಸಿದ್ದಾರೆ.
“ಕಾಂಗ್ರೆಸ್ ಪಕ್ಷವು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಸಮುದಾಯಗಳ ನಡುವೆ ಸೇತುವೆಯಾಗುತ್ತೇವೆ. ಜನರನ್ನೆಲ್ಲ ಒಗ್ಗೂಡಿಸುವ ಕೆಲಸ ಮಾಡುತ್ತೇವೆ. ಆದರೆ ಬಿಜೆಪಿ ಇದಕ್ಕೆ ವಿರುಧ್ದ ವಾಗಿ ದೇಶದಲ್ಲಿ ಇಂತಹ ದ್ವೇಷದ ವಾತಾವರಣ ಸೃಷ್ಟಿಗೆ ಕಾರಣವಾಗಿದೆ. ಇದು ನಮ್ಮ ತತ್ವಕ್ಕೆ ವಿರುಧ್ದವಾದದ್ದು. ದ್ವೇಷದ ಮೂಲಕ ಸಮಸ್ಯೆ ಬಗೆ ಹರಿಸುವುದನ್ನು ನಾನು ನಂಬುವುದಿಲ್ಲ ಎಂದಿದ್ದಾರೆ.