ಹೊಸದಿಗಂತ ವರದಿ ಮಡಿಕೇರಿ:
ಮಾವುತ ಸೇರಿದಂತೆ ಇಬ್ಬರ ಮೇಲೆ ದಾಳಿ ನಡೆಸಿದ ಸಾಕಾನೆಯೊಂದು ಓರ್ವನನ್ನು ಬಲಿ ಪಡೆದ ಘಟನೆ ಶುಕ್ರವಾರ ಬೆಳ್ಳಂಬೆಳಗ್ಗೆ ದುಬಾರೆಯಲ್ಲಿ ನಡೆದಿದೆ. ದುಬಾರೆ ಹಾಡಿಯ ನಿವಾಸಿ ಬಸಪ್ಪ(28) ಮೃತರು.
ಮನೆಯಿಂದ ನಡೆದುಕೊಂಡು ಹೋಗುತ್ತಿದ್ದ ಬಸಪ್ಪ ಅವರ ಮೇಲೆ ಸಾಕಾನೆ ದಾಳಿ ನಡೆಸಿದ್ದು, ವಿಷಯವರಿತು ಸ್ಥಳಕ್ಕೆ ತೆರಳಿದ ಮಾವುತನ ಮೇಲೂ ದಾಳಿ ಮಾಡಿದೆ. ಆದರೆ ಮಾವುತ ಪ್ರಾಣಾಪಾಯದಿಂದ ಪಾರಾಗಿದ್ದು, ಆನೆ ದಾಳಿಯಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಬಸಪ್ಪ ಅವರನ್ನು ಉಪ ವಲಯಾರಣ್ಯಾಧಿಕಾರಿ ರಂಜನ್ ಅವರು ಸಿದ್ದಾಪುರ ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವಿಗೀಡಾಗಿದ್ದಾರೆ.
ಸಿದ್ದಾಪುರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಸಪ್ಪ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.