ಹೊಸದಿಗಂತ ವರದಿ ಉಡುಪಿ:
ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರ ಆಶೀರ್ವಾದದೊಂದಿಗೆ ಲೋಕ ಕಲ್ಯಾಣಕ್ಕಾಗಿ ಅಮೆರಿಕಾದ ಪ್ರಥಮ ದೇವಾಲಯವಾದ ಶ್ರೀ ವೆಂಕಟಕೃಷ್ಣ ಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ನಡೆಯಲಿರುವ ಸಂಹಿತಾ ಯಾಗ ಪೂರ್ವಭಾವಿಯಾಗಿ ದೇವತಾ ಪ್ರಾರ್ಥನೆ, ನವಗ್ರಹಯಾಗ, ಗಣಹೋಮ ಶನಿವಾರ ಸಂಪನ್ನಗೊಂಡಿತು.
ಎರಡನೇ ದಿನದಂದು ಅರಣಿ ಮಥನದೊಂದಿಗೆ ಸಾಂಪ್ರದಾಯಿಕವಾಗಿ ಪ್ರಾರಂಭವಾಗಿ ಕೂಷ್ಮಂಡ ಹೋಮ, ಪವಮಾನ ಹೋಮಗಳು ನಡೆದವು.
ಶ್ರೀಮಠದ ವಿದ್ವಾಂಸ ವೇದಮೂರ್ತಿ ಕಿದಿಯೂರು, ರಾಮದಾಸ ಭಟ್ ಮತ್ತು ವೇದಮೂರ್ತಿ ಹೆರ್ಗ ವೇದವ್ಯಾಸ ಭಟ್ ಅವರ ಉಪಸ್ಥಿತಿಯಲ್ಲಿ ಇಪ್ಪತ್ತು ಜನರ ಋತ್ವಿಜರ ತಂಡ ಕಾರ್ಯಕ್ರಮಗಳನ್ನು ನಡೆಸಿ ಕೊಡುತ್ತಿದ್ದಾರೆ. ಶ್ರೀಮಠದ ವಿದೇಶಿ ಶಾಖೆಗಳ ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯ ಮತ್ತು ಫಿನಿಕ್ಸ್ ನ ಶ್ರೀಮಠದ ಪ್ರಧಾನ ಅರ್ಚಕ ಕಿರಣ್ ಕುಮಾರ್ ರವರ ಸಂಯೋಜಕತ್ವದಲ್ಲಿ ಫೀನಿಕ್ಸ್ ಮಹಾನಗರದಲ್ಲಿ ಸಂಭ್ರಮದ ಕಾರ್ಯಕ್ರಮ ನಡೆಯುತ್ತಿದೆ ಎಂದು ಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.