ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಮ್ ಆದ್ಮಿ ಪಕ್ಷದ ಮಾಜಿ ಸಂಸದ ರಾಘವ್ ಚಡ್ಡಾ ಬಿಜೆಪಿ ಸೇರ್ಪಡೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪಕ್ಷಾಂತರ ರಾಜಕಾರಣವನ್ನು ಕಟುವಾಗಿ ಟೀಕಿಸಿದ ಅವರು, ಬಿಜೆಪಿಯನ್ನು ಪೌರಾಣಿಕ ರಾಕ್ಷಸ ‘ಬಕಾಸುರ’ನಿಗೆ ಹೋಲಿಸಿ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾವತ್, ಬಿಜೆಪಿ ನಿರಂತರವಾಗಿ ಇತರ ಪಕ್ಷಗಳ ನಾಯಕರನ್ನು ಸೆಳೆಯುವ ಮೂಲಕ ತನ್ನ ಬಲ ಹೆಚ್ಚಿಸಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು. ನಿನ್ನೆವರೆಗೂ ಬಿಜೆಪಿ ವಿರುದ್ಧ ಕಿಡಿಕಾರುತ್ತಿದ್ದವರು ಇಂದು ಅದೇ ಪಕ್ಷದತ್ತ ಮುಖ ಮಾಡಿರುವುದು ಅಚ್ಚರಿಯ ಸಂಗತಿ ಎಂದರು.
ಇದನ್ನೂ ಓದಿ:
ಪಕ್ಷ ಬದಲಿಸಿದ ನಾಯಕರು ಜನಸಾಮಾನ್ಯರ ಧ್ವನಿಯಾಗಿರಲಿಲ್ಲ, ಕೇವಲ ಪ್ರಚಾರದಲ್ಲಿದ್ದ ಮುಖಗಳಷ್ಟೇ ಎಂದು ಟೀಕಿಸಿದ ಅವರು, ಇಂತಹ ಬೆಳವಣಿಗೆಗಳಿಂದ ವಿರೋಧ ಪಕ್ಷಗಳ ಶಕ್ತಿ ಕುಂದುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಘವ್ ಚಡ್ಡಾ ಬಿಜೆಪಿ ಸೇರ್ಪಡೆ ಇದೀಗ ರಾಷ್ಟ್ರ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಬಿಜೆಪಿಯವರು ಸಿಕ್ಕಿದ್ದನ್ನೆಲ್ಲಾ ತಿಂದು ತೇಗುತ್ತಾರೆ. ರಾಘವ್ ಚಡ್ಡಾ ಅವರಂತಹ ಏಳು ಮಂದಿ ಆ ನರಕದಂತಹ ಪಕ್ಷಕ್ಕೆ ಸೇರಿದ್ದಾರೆ. ಅದರ ಬಗ್ಗೆ ನಮಗೆ ಯಾವುದೇ ವಿಷಾದವಿಲ್ಲ. ನರಕ ಹೇಗಿರುತ್ತದೆ ಎಂಬುದು ಅವರಿಗೆ ಶೀಘ್ರದಲ್ಲೇ ತಿಳಿಯಲಿದೆ ಎಂದು ಕಿಡಿಕಾರಿದರು.



