ಹೊಸದಿಗಂತ ವರದಿ ವಿಜಯಪುರ:
ಸೋಲುವ ಭೀತಿಯಿಂದ ಆಧುನಿಕ ಭಗೀರಥ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮಹಿಳೆಯರಿಗೆ ಸೀರೆ ಹಾಗೂ ಮೊಬೈಲ್ ಹಂಚಿಕೆ ಮಾಡುತ್ತಿದ್ದಾರೆ ಎಂದು ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ, ಹೇಡಿ ರಾಜಕಾರಣ ಮಾಡುವ ಕೆಲಸ ಮತ್ತೆ ಈಗಿನಿಂದಲೇ ಆರಂಭಗೊಂಡಿದೆ ಎಂದು ಪರೋಕ್ಷವಾಗಿ ಶಾಸಕ ಎಂ.ಬಿ.ಪಾಟೀಲ ವಿರುದ್ಧ ಕಿಡಿಕಾರಿದ ಅವರು, ಬಬಲೇಶ್ವರ ಕ್ಷೇತ್ರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾಂಗ್ರೆಸ್ ಸೀರೆ, ಮೊಬೈಲ್ ಹಂಚುವ ಆಮಿಷದ ಅಕ್ರಮ ಮಾರ್ಗ ಅನುಸರಿಸುತ್ತಿದೆ ಎಂದು ದೂರಿದರು.
ಆದರೂ ಬಬಲೇಶ್ವರ ಕ್ಷೇತ್ರದ ಜನರು ಇವರ ಸಣ್ಣತನದ ಆಮಿಷಕ್ಕೆ ಬಲಿಯಾಗುವುದಿಲ್ಲ. ಬಬಲೇಶ್ವರ ಕ್ಷೇತ್ರದ ರಾಜಕೀಯ ಕುತಂತ್ರದಿಂದ ನನಗೆ ಸೋಲಾಗಿದೆ. ಆದರೆ ನಾನು ಹಣ ಗಳಿಸಿಲ್ಲ, ಬದಲಾಗಿ ಜನರ ಹೃದಯ ಗೆದ್ದಿದ್ದೇನೆ ಎಂದು ಹೇಳಿದರು.