ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಖಾಸಗಿ ಶಾಲಾ ಬಸ್ ಮಳೆ ನೀರಿನಲ್ಲಿ ಸಿಲುಕಿಕೊಂಡ ಘಟನೆ ಮಹೆಬೂಬ್ನಗರದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದರಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನಿನ್ನೆ ರಾತ್ರಿ ಸುರಿದ ಮಳೆಗೆ ಮಹೆಬೂಬನಗರ ಮಂಡಲದ ಕೋಡೂರು ಬಳಿ ರೈಲ್ವೆ ಕೆಳ ಸೇತುವೆ ಸಂಪೂರ್ಣ ಜಲಾವೃತವಾಗಿದೆ.
ಇಂದು ಬೆಳಗ್ಗೆ ಖಾಸಗಿ ಶಾಲಾ ಬಸ್ ಸಮೀಪದ ಹಳ್ಳಿಗಳಿಂದ ವಿದ್ಯಾರ್ಥಿಗಳನ್ನು ಕರೆತರಲು ಹೊರಟಿತ್ತು. ರಾಮಚಂದ್ರಾಪುರ, ಮಾಚನಪಲ್ಲಿ, ಸೂಗೂರಗಡ್ಡ ತಾಂಡಾದಿಂದ ಸುಮಾರು 30 ವಿದ್ಯಾರ್ಥಿಗಳನ್ನು ಹೊತ್ತು ಮಹೆಬೂಬ್ ನಗರಕ್ಕೆ ತೆರಳುತ್ತಿದ್ದ ಶಾಲಾ ಬಸ್ ಕೋಡೂರು ಬಳಿಯ ರೈಲ್ವೆ ಕೆಳ ಸೇತುವೆಯಲ್ಲಿದ್ದ ಮಳೆ ನೀರಿನಲ್ಲಿ ಸಿಲುಕಿಕೊಂಡಿದೆ.
ಬಸ್ನಲ್ಲಿ ಮಕ್ಕಳು ಕುಳಿತಿದ್ದ ಸೀಟಿನವರೆಗೂ ನೀರು ಬಂದಿದ್ದರಿಂದ ವಿದ್ಯಾರ್ಥಿಗಳು ಆತಂಕಗೊಂಡು ಕಿರುಚಾಡಿದ್ದಾರೆ. ಹೀಗಾಗಿ ಚಾಲಕ ಬಸ್ ಅನ್ನು ಅಲ್ಲೇ ನಿಲ್ಲಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕಾಪಾಡಿದ್ದಾರೆ. ಈಗಾಗಲೇ ಬಸ್ 40%ಮುಳುಗಡೆಯಾಗಿದ್ದು, ಮುಂದೆ ಹೋಗಿದ್ದರೆ ಸಂಪೂರ್ಣ ನೀರಿನಲ್ಲಿ ಮುಳುಗುತ್ತಿತ್ತು. ನೀರಿರುವುದು ಗೊತ್ತಿದ್ದರೂ ಇಲ್ಲಿಗೆ ಬಂದ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.