ಹೊಸದಿಗಂತ ವರದಿ ಹುಬ್ಬಳ್ಳಿ:
ಖಾಸಗಿ ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕ ಮಾಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ನ. ಮೂರರವರೆಗೆ ಈಡೇರಿಸದಿದ್ದರೆ ಅನಿರ್ಧಿಷ್ಟ ಕಾಲಾವಧಿಯವರೆಗೆ ಶಾಲಾ ಕಾಲೇಜ್ ಬಂದ್ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಹಾಗೂ ನೌಕರರ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ಬಸವರಾಜ ಹೊರಟ್ಟಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟ ಮಾಡಲಾಗುವುದು. ಸರ್ಕಾರಿ ಶಾಲೆ ಜೊತೆ ಅನುದಾನಿತ ಶಾಲೆಗಳು ಹಲವು ದಶಕಗಳಿಂದ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜ್ ಹಲವಾರು ಸಮಸ್ಯೆಗಳ ಎದುರಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದಲ್ಲಿ ಶೇ. ಅರವತ್ತರಷ್ಟು ಖಾಸಗಿ ಅನುದಾನಿತ ಶಾಲೆಗಳಿವೆ. ರಾಜ್ಯ ಸರ್ಕಾರದ ನಿರ್ಧಾರಗಳಿಂದ ಅನುದಾನಿತ ಶಾಲಾ ಕಾಲೇಜ್ ಗಳು ಬಂದ್ ಆಗುವ ಪರಿಸ್ಥಿತಿ ಬಂದಿದೆ. ಶಾಲಾ- ಕಾಲೇಜ್ ಗಳಲ್ಲಿ ಶಿಕ್ಷಕರ ಕೊರತೆ ಸಾಕಷ್ಟು ಕಾಡುತ್ತಿದೆ. ಅನೇಕ ಸಂಸ್ಥೆಗಳ ಸಂಕಷ್ಟ ಎದುರಿಸುತ್ತಿವೆ. ಶಿಕ್ಷಣ ವ್ಯವಸ್ಥೆ ಹದಗೆಡುವ ಪರಿಸ್ಥಿತಿ ಬಂದು ತಲುಪಿದೆ. ಸರ್ಕಾರಿ ಶಾಲೆಗಳಿಗೆ ಇರುವ ನಿಯಮಗಳು ಅನುದಾನಿತ ಶಾಲೆಗಳಲ್ಲಿಯೂ ಬರಬೇಕು ಎಂದು ಆಗ್ರಹಿಸಿದರು



