ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷವು ಎಸ್ಡಿಪಿಐ ಮತ್ತು ಪಿಎಫ್ಐ ಕಪಿಮುಷ್ಟಿಯಲ್ಲಿದೆ. ಅದರಿಂದ ಹೊರಬರಲು ಸಾಧ್ಯವಿಲ್ಲದೇ ತುಷ್ಟಿಕರಣ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ವರ್ತಿಸುತ್ತಿದೆ. ಕಾಂಗ್ರೆಸ್ನವರು ‘ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)’ ಮತ್ತು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (PFI) ಅವರ ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂದರು.
ಬಿಜೆಪಿ ಪಕ್ಷ ಎಸ್ಡಿಪಿಐ ಮತ್ತು ಪಿಎಫ್ಐ ವಿರುದ್ಧ ಮಾತನಾಡಿದರೆ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗುತ್ತದೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರ ದಾಖಲೆ ಸಹಿತ ದೇಶ ವಿರೋಧಿ ಕೃತ್ಯದಲ್ಲಿ ತೊಡಗಿದ್ದ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (PFI) ಅನ್ನು ನಿಷೇಧಿಸಿತು. ಹೀಗಿದ್ದರು ಕಾಂಗ್ರೆಸ್ ತಮ್ಮ ಪರ ಮಾತನಾಡುತ್ತಿಲ್ಲ ಎಂಬ ಅಸಮಾಧಾನ ‘ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)’ ಗೆ ಇದೆ. ಈ ಎಲ್ಲ ಬೆಳವಣಿ ಆದ ಮೇಲೆ ನಮಗೆ ರಕ್ಷಣೆ ಕೊಡದ ಕಾಂಗ್ರೆಸ್ಗೆ ನಾವು ಯಾಕೆ ರಕ್ಷಣೆ ಕೊಡಬೇಕು ಎಂದು ಕಾಂಗ್ರೆಸ್ ನಾಯಕರನ್ನು ಪಿಎಫ್ಐ ನಾಯಕರು ಪ್ರಶ್ನಿಸುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು. ಕಾಂಗ್ರೆಸ್ನ ಕಾಲದಲ್ಲಿ ಎಸ್ಡಿಪಿಐ, ಪಿಎಫ್ಐ ಪ್ರಬಲವಾಗಿ ಬೆಳೆದಿದ್ದವು ಎಂದು ತಿಳಿಸಿದರು.
ಈಗ ದೊಡ್ಡ ಪ್ರಮಾಣದಲ್ಲಿ ಎಸ್ಡಿಪಿಐ ಬೆಳೆದಿದೆ. ಹಾಗಾಗಿ ಬಾಲವೇ ದೇಹವನ್ನು ಅಲುಗಾಡಿಸಿದಂತಹ ಸ್ಥಿತಿ ಇದೆ. ಇದರಿಂದ ಕಾಂಗ್ರೆಸ್ ಪಕ್ಷ ಇವತ್ತು ಎಸ್ಡಿಪಿಐ ಮತ್ತು ಪಿಎಫ್ಐ ಕಪಿ ಮುಷ್ಟಿಯಲ್ಲಿದೆ. ಎಸ್ಡಿಪಿಐ ಬಿಜೆಪಿಯ ಬಿ ಟೀಂ ಅಲ್ಲ ಬಿ ಟೀಂ ಆಗಿದ್ದರೆ ನಾವು ಪಿಎಫ್ಐ ಬ್ಯಾನ್ ಮಾಡ್ತಿದ್ದೆವಾ. ತಾವು ಮಾಡಿದ ತಪ್ಪನ್ನು ಮುಚ್ಚಲು ಈ ರೀತಿಯ ಆರೋಪ ಮಾಡ್ತಿದಾರೆ ಎಂದು ಹೇಳಿದರು.
ಸೋನಿಯಾಗಾಂಧಿ ಹುಬ್ಬಳ್ಳಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸೋನಿಯಾಗಾಂಧಿ ಬರಲಿ ನಾವು ಕಾಂಗ್ರೆಸ್ ನಾಯಕರ ರೀತಿ ಅಳೋಲ್ಲ, ಕಂಪ್ಲೇಟ್ ಮಾಡುವುದಿಲ್ಲ. ಮೋದಿ, ಅಮಿತ್ ಶಾ ಯಾಕೆ ಬಂದರು ಅಂತ ಕಾಂಗ್ರೆಸ್ನವರು ಕೇಳಿದಂತೆ ನಾವು ಕೇಳಲ್ಲ. ರಾಹುಲ್ ಗಾಂಧಿ ಬಂದಾಗಲು ನಾನು ಸ್ವಾಗತಿಸಿದ್ದೆ. ಸೋನಿಯಾ ಗಾಂಧಿ ಬಂದರು ಸ್ವಾಗತ ಮಾಡುತ್ತೇನೆ. ಜನರಿಗೆ ಯಾವ್ಯಾವ ರಾಷ್ಟ್ರೀಯ ನಾಯಕರು ಬದ್ಧತೆಯಲ್ಲಿ ಇದ್ದಾರೆ ಎಂಬುದು ಗೊತ್ತಿದೆ ಎಂದರು.