ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಡನೀರು ಶ್ರೀಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದ್ವಿತೀಯ ಚಾತುರ್ಮಾಸ್ಯ ಕಾರ್ಯಕ್ರಮಗಳು ಜುಲೈ 13 ರಿಂದ ಸೆಪ್ಟೆಂಬರ್ 10ರವರೆಗೆ ವಿವಿಧ ಧಾರ್ಮಿಕ, ತಾಂತ್ರಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಜುಲೈ 12ರ ಸಾಯಂಕಾಲ ಎಡನೀರು ಶ್ರೀಮಠದಲ್ಲಿ ನೂತನವಾಗಿ ನಿರ್ಮಿಸಿದ ವೃಂದಾವನದ ಪ್ರಾಂಗಣ ಹಾಗೂ ಮೇಲ್ಚಾವಣಿಯ ಪ್ರಾಸಾದ ಶುದ್ಧಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ ಕಾರ್ಯಕ್ರಮಗಳು ಜರಗಲಿದ್ದು, 13 ರಂದು ಬೆಳಗ್ಗೆ ಶ್ರೀ ಮಹಾಗಣಪತಿ ಹೋಮದೊಂದಿಗೆ ಚಾತುರ್ಮಾಸ್ಯ ವ್ರತಾಚರಣೆ ಆರಂಭಗೊಳ್ಳಲಿದೆ.
ಅಂದು ಬೆಳಗ್ಗೆ 8 ರಿಂದ ವ್ಯಾಸ ಪೂಜೆ, ಸುಕೃತ ಹೋಮಗಳಾದ ಶ್ರೀ ದಕ್ಷಿಣಾಮೂರ್ತಿ ಹೋಮ, ಶ್ರೀ ಗೋಪಾಲಕೃಷ್ಣ ಮಂತ್ರ ಹೋಮ, ಶ್ರೀಸೂಕ್ತ ಹೋಮ, ಶ್ರೀ ವಿರಾಜ ಮಂತ್ರ ಹೋಮ ಮತ್ತು ಬೃಂದಾವನದಲ್ಲಿ ಅಧಿಷ್ಠಾನರಾಗಿರುವ ಎಲ್ಲಾ ಶ್ರೀ ಗುರುಗಳಿಗೂ ವಿಶೇಷವಾದ ಹಸ್ತೋದಕ ಬಿಕ್ಷಾ ಸೇವೆಯು ಜರಗಲಿದ್ದು, ಮಧ್ಯಾಹ್ನ ಮಹಾಪೂಜೆ, ಅನ್ನದಾನ ಕಾರ್ಯಕ್ರಮಗಳು ಜರುಗಲಿದೆ. ಮಧ್ಯಾಹ್ನ 2 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ನೆರವೇರಿಸಲಿದ್ದಾರೆ. ಕಾಸರಗೋಡು ಸಂಸದ ರಾಜ್ ಮೋಹನ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ನಿಕಟಪೂರ್ವ ಶಾಸಕ ಕೆ.ಕುಂಞ ರಾಮನ್ ಹಾಗೂ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಡಾ. ಟಿ. ಶಾಮ್ ಭಟ್ ಭಾಗವಹಿಸಲಿದ್ದಾರೆ. ಅಪರಾಹ್ನ 4ಗಂಟೆಯಿಂದ ಶ್ರೀ ಹನುಮಗಿರಿ ಮೇಳದವರಿಂದ ಶ್ರೀಕೃಷ್ಣ ಲೀಲೆ – ಕರ್ಣಪರ್ವ – ಗದಾಪರ್ವ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.