ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಶಕ್ತಿಯನ್ನು ಮಣಿಸಲು, ಅಧಿಕಾರದಿಂದ ಹೊರಗಿಡಲು ಯತ್ನಿಸುತ್ತಿರುವ ವಿರೋಧಪಕ್ಷಗಳು ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಿವೆ.
ಜುಲೈ 17 ಮತ್ತು 18ರಂದು ವಿರೋಧ ಪಕ್ಷಗಳ ಮುಖಂಡರ ಜೊತೆ ಸಭೆ ನಡೆಯಲಿದ್ದು, ಕಾಂಗ್ರೆಸ್, ಟಿಎಂಸಿ, ಆಪ್ ಸೇರಿದಂತೆ 20ಕ್ಕೂ ಅಧಿಕ ವಿಪಕ್ಷಗಳ ಮುಖಂಡರು ಭಾಗಿಯಾಗಲಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಮೋದಿ ವಿರುದ್ಧ ಪ್ರಬಲ ಒಕ್ಕೂಟ ರಚಿಸಲು ಪ್ರತಿಪಕ್ಷಗಳು ಒಗ್ಗಟ್ಟಿನ ಮಂತ್ರವನ್ನು ಹಿಡಿದಿವೆ.
ಈ ಮುಂಚೆ ಜೂನ್ 23 ರಂದು ಬಿಹಾರದ ಪಾಟ್ನಾದಲ್ಲಿ ವಿಪಕ್ಷಗಳ ಮೊದಲ ಸಭೆ ನಡೆದಿತ್ತು. ಎರಡನೇ ಸಭೆ ಕಾಂಗ್ರೆಸ್ ನೇತೃತ್ವದಲ್ಲಿ ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ.
ಬಿಜೆಪಿ ವಿರುದ್ಧದ ಈ ಸಭೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ಹೆಚ್ಚು ಸಕ್ರಿಯವಾದಂತಿದೆ. 26 ಪಕ್ಷಗಳ ಮುಖಂಡರಿಗೂ ಆಹ್ವಾನ ನೀಡಲಾಗಿದೆ.
ಸಭೆಯಲ್ಲಿ ಮೈತ್ರಿಕೂಟದ ಹೆಸರು, ಅಜೆಂಡಾ ಮತ್ತು ಮೈತ್ರಿಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಸಂಸತ್ ಅದಿವೇಶನದಲ್ಲಿ ಒಗ್ಗೂಡಿ ಹೋರಾಡುವ ಕುರಿತು ಸಮಾಲೋಚನೆ ನಡೆಸಲಾಗುವುದು.
ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಉದ್ಧವ್ ಠಾಕ್ರೆ, ಎಂ.ಕೆ. ಸ್ಟಾಲಿನ್, ಅರವಿಂದ್ ಕೇಜ್ರಿವಾಲ್, ಶರದ್ ಪವಾರ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.