ಹೊಸದಿಗಂತ ವರದಿ,ಮಡಿಕೇರಿ:
ಕುಶಾಲನಗರ ತಾಲೂಕಿನ ಕೂಡ್ಲೂರು ಚೆಟ್ಟಳ್ಳಿಯ ತಾಯಿ, ಮಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಗುತ್ತಿಗೆದಾರ ಸುರೇಂದ್ರ ಟಿ.ಕೆ ಅವರ ಪತ್ನಿ ಬೇಬಿರಾಣಿ ಎಂ.ಯು ಹಾಗೂ ಪುತ್ರಿ ರಿನಿಶಾ ಟಿ.ಎಸ್ ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದು ಗಮನ ಸೆಳೆದಿದ್ದರು.
ಗೋಣಿಕೊಪ್ಪಲಿನ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ರಿನಿಶಾ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 570 ಅತ್ಯುನ್ನತ ಅಂಕಗಳನ್ನು ಪಡೆದುಕೊಂಡಿದ್ದಾರೆ. ತಾಯಿ ಬೇಬಿರಾಣಿ ನೆಲ್ಲಿಹುದಿಕೇರಿ ಜೂನಿಯರ್ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದು, ಕಲಾ ವಿಭಾಗದಲ್ಲಿ 600ಕ್ಕೆ 388 ಅಂಕಗಳನ್ನು ಪಡೆದು ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಕನ್ನಡ ವಿಷಯದಲ್ಲಿ ಪುತ್ರಿ 96 ಹಾಗೂ ತಾಯಿ 93 ಅಂಕ ಪಡೆದುಕೊಂಡಿದ್ದಾರೆ. ಸುಮಾರು 25 ವರ್ಷಗಳ ಹಿಂದೆ 10ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದ ನನಗೆ ಇದೀಗ ಮಗಳು ಸ್ಫೂರ್ತಿ ತುಂಬಿ ದ್ವಿತೀಯ ಪಿಯುಸಿ ಬರೆಯುವಂತೆ ಪ್ರೋತ್ಸಾಹ ನೀಡಿದ ಪರಿಣಾಮ ಇಂದು ನಾನು ಉತ್ತೀರ್ಣಳಾಗಿದ್ದೇನೆ ಎಂದು ಬೇಬಿರಾಣಿ ಹರ್ಷ ವ್ಯಕ್ತಪಡಿಸಿದರು.
ನನಗೆ ನಾನು ಉತ್ತೀರ್ಣನಾಗಿದ್ದೇನೆ ಎನ್ನುವುದಕ್ಕಿಂತ ಹೆಚ್ಚು ನನ್ನ ಅಮ್ಮ 388 ಅಂಕ ಗಳಿಸಿ ಉತ್ತೀರ್ಣರಾಗಿರುವುದು ಹೆಚ್ಚು ಸಂತೋಷ ತಂದಿದೆ ಎಂದು ಪುತ್ರಿ ರಿನಿಶಾ ಸಂಭ್ರಮ ಹಂಚಿಕೊಂಡಿದ್ದಾಳೆ.