ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯ ನಡುವೆ, ಬಂಡಾಯ ಶಿವಸೇನೆ ಶಾಸಕ ಏಕನಾಥ್ ಶಿಂಧೆ ನಿನ್ನೆ ರಾತ್ರಿ ಗುಜರಾತ್ನ ವಡೋದರಾದಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದಾರೆ. ಶನಿವಾರ ಮಧ್ಯರಾತ್ರಿ ಗುಜರಾತ್ನ ವಡೋದರಾದಲ್ಲಿ ಏಕನಾಥ್ ಶಿಂಧೆ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ, ಸರ್ಕಾರ ರಚಿಸುವ ವಿಚಾರವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ವಡೋದರಾದಲ್ಲಿದ್ದರು ಎಂಬುದು ಗಮನಾರ್ಹ. ಅವರೂ ಈ ಸಭೆಯಲ್ಲಿ ಭಾಗವಹಿಸಿದ್ದಾರಾ? ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ನಿನ್ನೆ ರಾತ್ರಿ ಅಸ್ಸಾಂನ ಗುವಾಹಟಿಯಿಂದ ವಡೋದರಾಕ್ಕೆ ವಿಶೇಷ ವಿಮಾನದಲ್ಲಿ ತೆರಳಿದ ಏಕನಾಥ್ ಶಿಂಧೆ, ದೇವೇಂದ್ರ ಫಡ್ನವೀಸ್ ಅವರೊಂದಿಗಿನ ಚರ್ಚೆಯ ನಂತರ, ಅದೇ ವಿಮಾನದಲ್ಲಿ ಗುವಾಹಟಿಯ ತಮ್ಮ ಹೋಟೆಲ್ಗೆ ಮರಳಿದರು. ಹೋಟೆಲ್ನಲ್ಲಿ ಶಿಂಧೆ ಜತೆಗೆ ಸುಮಾರು 40 ಮಂದಿ ಬಂಡಾಯ ಶಾಸಕರು ಇದ್ದರು ಎನ್ನಲಾಗುತ್ತಿದೆ.
ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್ ಈಗಾಗಲೇ ಶಿಂಧೆ ಸೇರಿದಂತೆ 16 ಶಾಸಕರಿಗೆ ನೋಟಿಸ್ ಕಳುಹಿಸಿದ್ದಾರೆ. ಸೋಮವಾರದೊಳಗೆ ಪ್ರತಿಕ್ರಿಯೆ ನೀಡಿ ಮುಂಬೈಗೆ ಮರಳುವಂತೆ ಆದೇಶಿಸಲಾಗಿದೆ. ಈ ನಡುವೆ ಏಕನಾಥ್ ಶಿಂಧೆ ಬಂಡಾಯದಿಂದ ಸಿಎಂ ಉದ್ಧವ್ ಠಾಕ್ರೆ ಸರ್ಕಾರ ಪತನದ ಅಂಚಿನಲ್ಲಿದೆ.