ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಕಾರ್ಯಕರ್ತ ಗೋಪಾಲ್ ಚೆಟ್ಟಿಯಾರ್ ಇಂದು ನಸುಕಿನ 2.45ಕ್ಕೆ ದೈವಾಧೀನರಾಗಿದ್ದಾರೆ.
ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸೇವಾ ಪ್ರಮುಖ್, ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖ್, ಮಂಗಳೂರು ವಿಭಾಗ ಸಂಘಚಾಲಕರಾಗಿ ಕಾರ್ಯನಿರ್ವಹಿಸಿದ್ದ ಗೋಪಾಲ್ ಚೆಟ್ಟಿಯಾರ್ ಆವರಿಗೆ 78 ವರ್ಷ ವಯಸ್ಸಾಗಿತ್ತು.
ಮೂಲತಃ ಕೇರಳದ ಪೆರ್ಲದವರಾದ ಚೆಟ್ಟಿಯಾರ್ ಅವರು, ವಿದ್ಯಾರ್ಥಿ ಜೀವನದಿಂದಲ್ಲೇ ಸಂಘದ ಸ್ವಯಂಸೇವಕರು, ಕಾರ್ಯಕರ್ತರು.
ತಹಸೀಲ್ದಾರರಾಗಿದ್ದ ಅವರು, ನಿವೃತ್ತಿಯ ನಂತರ ಪೂರ್ಣಪ್ರಮಾಣದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಅವರ ಅಂತಿಮ ವಿಧಿವಿಧಾನಗಳು ಉಪ್ಪಳ ಸಮೀಪದ ಬಂದ್ಯೋಡು ಮನೆಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಆರೆಸ್ಸೆಸ್ ಸಂತಾಪ:
ಅಗಲಿದ ಗೋಪಾಲ್ ಚೆಟ್ಟಿಯಾರ್ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ, ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಗೋಪಾಲ ಚೆಟ್ಟಿಯಾರ್ ಅವರ ನಿಧನದ ಸುದ್ದಿ ಅತೀವ ದುಃಖಕರ. ಅವರ ಕುಟುಂಬಕ್ಕೆ ಹಾಗೂ ಪರಿಚಿತರು, ಅಭಿಮಾನಿಗಳಿಗೆ ನನ್ನ ತೀವ್ರ ಸಂತಾಪಗಳು. ಸಂಘಕಾರ್ಯಕ್ಕೆ ಜೀವನ ಮುಡಿಪಿಟ್ಟು ಸಮಾಜದ ಹಲವು ಮುಖಗಳಲ್ಲಿ ಸಕ್ರಿಯರಾಗಿದ್ದು ಮೌನ ತಪಸ್ಸು ಗೈದ ಚೆಟ್ಟಿಯಾರರು ಆದರ್ಶ ಸ್ವಯಂಸೇವಕರಾಗಿ ಬದುಕಿದರು. ಅಂಥ ಶ್ರೇಷ್ಠ ಜೀವನಕ್ಕೆ ನಮನಗಳು. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಪರಮಾತ್ಮ ಗತಿಸಿದ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಂತಾಪ ಪತ್ರದಲ್ಲಿ ಉಲ್ಲೇಖಸಿದ್ದಾರೆ.