ಹೊಸದಿಗಂತ ವರದಿ ಶ್ರೀರಂಗಪಟ್ಟಣ:
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ದೊಡ್ಡ ಅಪಾಯದಿಂದ ಮಂಡ್ಯ ಎಸ್ಪಿ ಪಾರಾಗಿರುವ ಘಟನೆ ಇಂದು ನಡೆದಿದೆ.
ತಾಲ್ಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರು ಸೇರಿದಂತೆ ಮೂರ್ನಾಲ್ಕು ಕಾರುಗಳು ನಜ್ಜುಗುಜ್ಜಾಗಿದ್ದು, ಕಾರೊಂದು ಹೊತ್ತಿ ಉರಿದಿದೆ.
ಬೆಂಗಳೂರು ಕಡೆಯಿಂದ ಮೈಸೂರು ಕಡೆ ತೆರಳುವ ವೇಳೆ ಹೆದ್ದಾರಿಯಲ್ಲಿ ಅತೀ ವೇಗವಾಗಿ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮುಂಬದಿ ಸಂಚರಿಸುತ್ತಿದ್ದ ನಾಲ್ಕು ಕಾರುಗಳು ಜಖಂಗೊಂಡಿವೆ.
ಕಾರಿನಲ್ಲಿ ಇದ್ದವರನ್ನ ಸ್ಥಳೀಯರು ಹಾಗೂ ಪೋಲೀಸರು ರಕ್ಷಣೆ ಮಾಡಿದ್ದು, ಕಾರಿಗೆ ಬೆಂಕಿ ಹೊತ್ತಿಕೊಳ್ಳುವ ವೇಳೆ ಕಿಟಕಿ ಗ್ಲಾಸ್ ಹೊಡೆದು ಕಾರಿನಲ್ಲಿದ್ದವರನ್ನು ಸಹ ರಕ್ಷಿಸಲಾಗಿದೆ.
ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿರುವ ದಸರಾ ಪೂರ್ವ ಸಿದ್ಧತೆ ಮತ್ತು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಾರಿಗೂ ಡಿಕ್ಕಿ ಸಂಭವಿಸಿದೆ. ಎಸ್.ಪಿ. ಯತೀಶ್ ಅವರು ತೆರಳುತ್ತಿದ್ದ ಕಾರು ಜಖಂಗೊಂಡ ಕಾರಣ ಅದನ್ನು ಅಲ್ಲೇ ಬಿಟ್ಟು ಬೇರೊಂದು ಕಾರಿನಲ್ಲಿ ಶ್ರೀರಂಗಪಟ್ಟಣಕ್ಕೆ ತೆರಳಿದರು.
ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.