ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: ಸ್ಕೂಟರ್ ಸವಾರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಟಿಪ್ಪರ್ ,ಮಹೀಂದ್ರ ಪಿಕ್ ಅಪ್ ಹಿಂಭಾಗ ಮತ್ತು ಅಲ್ಲೇ ಇದ್ದ ಸ್ಕೂಟರ್‌ಗೆ ಡಿಕ್ಕಿಯಾದ ಪರಿಣಾಮವಾಗಿ ಸ್ಕೂಟರ್ ಸವಾರ ನೇಪಾಲ ಮೂಲದ ಲೋಕ್‌ಬಹಾದ್ದೂರ್ ಕಡ್ಕ(೪೭) ಅವರು ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ಅವರ ಪತ್ನಿ ಮೀನಾ ಕಡ್ಕ ಅವರು ತೀವ್ರ ಸ್ವರೂಪದ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಕ್‌ಅಪ್‌ನಲ್ಲಿದ್ದ ಇಬ್ಬರೂ ಗಾಯಗೊಂಡಿದ್ದು ಪಡುಬಿದ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.

‘ಅಪಾಯಕಾರಿ ಜಂಕ್ಷನ್‘ ಎಂದೇ ಪರಿಗಣಿತವಾಗಿರುವ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ ೬೬ರ ಕಾರ್ಕಳ ಜಂಕ್ಷನ್‌ನಲ್ಲಿ ಈ ಅಪಘಾತವು ಫೆ. ೧೪ರ ಮಧ್ಯಾಹ್ನದ ವೇಳೆ ನಡೆದಿದೆ. ಉಡುಪಿ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಈ ಅವಘಡವು ಸಂಭವಿಸಿದೆ.

ಟಿಪ್ಪರ್ ಚಾಲಕನು ಮೊದಲಿಗೆ ಪಿಕ್‌ಅಪ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದನು. ಇದರಿಂದಾಗಿ ತಾಂತ್ರಿಕ ತೊಂದರೆಯಿಂದ ಎಡಕ್ಕೆ ಚಲಿಸಿ ಹೆದ್ದಾರಿ ಪಕ್ಕ ಪಿಕ್‌ಅಪ್ ವಾಲಿ ನಿಂತಿದೆ. ಟಿಪ್ಪರ್ ಚಾಲಕನು ಮತ್ತೆ ಬಲಕ್ಕೆ ಹೊಡೆದುಕೊಂಡಾಗ ಹೆದ್ದಾರಿಯ ಉಡುಪಿ – ಮಂಗಳೂರು ಭಾಗದ ಮಧ್ಯದಲ್ಲಿದ್ದ ಸ್ಕೂಟರ್‌ಗೆ ಡಿಕ್ಕಿಯಾಗಿದೆ. ರಭಸದಿಂದ ತನ್ನ ಸ್ಕೂಟರ್‌ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸಹಿತ ಸವಾರರಿಬ್ಬರೂ ಪಿಕ್‌ಅಪ್ ವಾಹನದ ಅಡಿಗೆ ಬಿದ್ದಿದ್ದು ಗಂಭೀರ ಗಾಯಗೊಂಡಿದ್ದರು.

ಲೋಕ್‌ಬಹಾದ್ದೂರ್ ಕಡ್ಕ ದಂಪತಿ ಮಂಗಳೂರಿಗೆ ಬಂದು ನೆಲೆಸಿ ೧೭ವರ್ಷಗಳಾಗಿದ್ದವು. ಈ ದಂಪತಿ ವಿವಿಧ ಪಿಜಿಗಳಿಗೆ ತಾವೇ ಹೋಗಿ ಅಡುಗೆ ಮಾಡಿ ಕೊಟ್ಟು ಬರುತ್ತಿದ್ದರು. ಉಡುಪಿಯಲ್ಲಿ ಸುತ್ತಾಡಿ ವಿವಿಧ ದೇವಳಗಳನ್ನು ಸಂದರ್ಶಿಸಿ ವಾಪಾಸಾಗುತ್ತಿದ್ದಾಗ ಲೋಕ್‌ಬಹಾದ್ದೂರ್ ಜವರಾಯನ ಸೆಳೆತಕ್ಕೆ ಸಿಲುಕಿದ್ದರಿಂದ ಮೀನಾ ಕಡ್ಕ ಕುಟುಂಬವು ದುಃಖಕ್ಕೀಡಾಗಿದೆ.
ಪಡುಬಿದ್ರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!