ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸ್ಟಾರ್ ಹೀರೋ ಶಾರುಖ್ ಖಾನ್ ಸಿನಿಮಾ ಜವಾನ್ ಸೆಪ್ಟೆಂಬರ್ 7 ರಂದು ಪ್ರೇಕ್ಷಕರ ಮುಂದೆ ಬಂದು ದೊಡ್ಡ ಯಶಸ್ಸನ್ನು ಗಳಿಸಿದೆ. ಇದರಲ್ಲಿ ನಯನತಾರಾ ನಾಯಕಿಯಾಗಿ ನಟಿಸಿದ್ದು, ವಿಜಯ್ ಸೇತುಪತಿ ವಿಲನ್ ಆಗಿ ನಟಿಸಿದ್ದಾರೆ. ಪ್ರಿಯಾಮಣಿ, ದೀಪಿಕಾ ಪಡುಕೋಣೆ.. ಇನ್ನು ಕೆಲವು ತಾರೆಯರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜವಾನ್ ಸಿನಿಮಾವನ್ನು ತಮಿಳು ಸ್ಟಾರ್ ಡೈರೆಕ್ಟರ್ ಅಟ್ಲಿ ನಿರ್ದೇಶಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಒಟ್ಟು ಕಲೆಕ್ಷನ್ ಸುಮಾರು 700 ಕೋಟಿ ಆಗಿದ್ದು, 1000 ಕೋಟಿಗೆ ಜಿಗಿಯಲಿದೆ.
ಈ ಚಿತ್ರದಲ್ಲಿ ಬಹುತೇಕ ದಕ್ಷಿಣದ ನಟರೇ ಇದ್ದಾರೆ. ಈ ಚಿತ್ರವನ್ನು ಸಹ ಸೌತ್ ನಿರ್ದೇಶಕರೇ ನಿರ್ದೇಶಿಸಿದ್ದಾರೆ. ಸೌತ್ ಸಂಗೀತ ನಿರ್ದೇಶಕರೇ ಸಂಗೀತವನ್ನೂ ನೀಡಿದ್ದಾರೆ. ಈ ಚಿತ್ರಕ್ಕೆ ಕೆಲಸ ಮಾಡಿರುವ ಬಹುತೇಕ ತಂತ್ರಜ್ಞರು ದಕ್ಷಿಣದವರೇ ಆಗಿದ್ದಾರೆ. ಜವಾನ್ ಚಿತ್ರದ ಭರ್ಜರಿ ಯಶಸ್ಸಿನ ನಂತರ ಚಿತ್ರತಂಡ ಇತ್ತೀಚೆಗೆ ಮುಂಬೈನಲ್ಲಿ ಸಕ್ಸಸ್ ಪ್ರೆಸ್ ಮೀಟ್ ಆಯೋಜಿಸಿತ್ತು.
ಈ ಪ್ರೆಸ್ ಮೀಟ್ ನಲ್ಲಿ ಶಾರುಖ್ ಖಾನ್ ಮಾತನಾಡಿ, ಚಿತ್ರಕ್ಕಾಗಿ ಹಲವು ವರ್ಷ ಪ್ರಯಾಣ ಮಾಡುವುದು ಅಪರೂಪ. ಕೊರೊನಾ ಮತ್ತು ಇತರ ಕಾರಣಗಳಿಂದಾಗಿ ಜವಾನ್ ಚಿತ್ರದ ಪ್ರಯಾಣ ನಾಲ್ಕು ವರ್ಷಗಳನ್ನು ತೆಗೆದುಕೊಂಡಿತು. ನಾಲ್ಕು ವರ್ಷಗಳ ಹಿಂದೆ ಕೇಳಿದ ಕಥೆ ಇಲ್ಲಿವರೆಗೆ ಮುಂದುವರೆದಿದೆ. ಜವಾನ್ ಚಿತ್ರಕ್ಕಾಗಿ ದಕ್ಷಿಣದ ಬಹಳಷ್ಟು ಮಂದಿ ಕೆಲಸ ಮಾಡಿದ್ದಾರೆ. ಜವಾನ್ ಚಿತ್ರಕ್ಕಾಗಿ ಶ್ರಮಿಸಿದ ಅನೇಕ ದಕ್ಷಿಣದ ತಂತ್ರಜ್ಞರು ಕೂಡ ಇದ್ದಾರೆ. ಕೆಲವು ತಿಂಗಳುಗಳ ಕಾಲ ಕುಟುಂಬದಿಂದ ದೂರ ಉಳಿದು ಮುಂಬೈನಲ್ಲಿದ್ದುಕೊಂಡು ಜವಾನ್ ಚಿತ್ರಕ್ಕಾಗಿ ಶ್ರಮಿಸಿದ್ದಾರೆ. ಈ ಸಿನಿಮಾಗೆ ಶ್ರಮಿಸಿದ ತಾಂತ್ರಿಕ ತಂಡವೇ ನಿಜವಾದ ಹೀರೋಗಳು. ಅದಕ್ಕಾಗಿ ಈ ಸಿನಿಮಾದ ಸಂಪೂರ್ಣ ಗೆಲುವು ದಕ್ಷಿಣದವರದ್ದೇ ಎಂದು ಶಾರುಖ್ ಹೇಳಿದರು.