ಹೊಸದಿಗಂತ ವರದಿ, ಮಂಗಳೂರು:
ದೇಶದ ಪ್ರಧಾನಿ ಮತ್ತು ರಕ್ಷಣಾ ಸಚಿವರ ತಾಯಂದಿರ ಬಗ್ಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಶೈಲಜಾ ಅಮರನಾಥ್ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ತಾಯಂದಿರ ಬಗ್ಗೆ ಅವಹೇಳನ ಮಾಡಿರುವ ಶೈಲಜಾ ಅವರ ವರ್ತನೆ ಖಂಡನೀಯ. ಅವರು ಮಾತಿನ ಮೇಲೆ ನಿಗಾ ವಹಿಸಲಿ. ಮಹಿಳೆಯರನ್ನು ತುಚ್ಛವಾಗಿ ಬಿಂಬಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಶೈಲಜಾ ಅವರ ಹೇಳಿಕೆ ಅವರ ನಿಜವಾದ ಸಂಸ್ಕಾರವನ್ನು ಬಿಂಬಿಸಿದೆ. ಪ್ರಚಾರ ಗಿಟ್ಟಿಸಲು ಬಾಯಿಗೆ ಬಂದ ಹಾಗೆ ಮಾತನಾಡುವುದನ್ನು ಅವರು ಮೊದಲು ನಿಲ್ಲಿಸಬೇಕು. ಸಮಾಜ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ಸಹಿಸುವುದಿಲ್ಲ ಎಂದು ಧನಲಕ್ಷ್ಮೀ ಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಕಸ್ತೂರಿ ಪಂಜ, ಪೂಜಾ ಪೈ, ಸೇವಂತಿ ಶ್ರೀಯಾನ್, ಮಮತಾ ಉಪಸ್ಥಿತರಿದ್ದರು