ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ಅಶ್ಲೀಲ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮಹಾರಾಷ್ಟ್ರ, ಅಸ್ಸಾಂ ಮತ್ತು ರಾಜಸ್ಥಾನದಲ್ಲಿ ದಾಖಲಾಗಿರುವ ಎಫ್ಐಆರ್ಎಸ್ ಅಡಿ ಯೂಟ್ಯೂಬರ್ ರಣವೀರ್ ಅಲಹಬಾದಿಯ ಬಂಧನಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ತಡೆ ನೀಡಿದೆ.
ತನ್ನ ವಿರುದ್ಧ ದಾಖಲಾಗಿರುವ ವಿವಿಧ ಎಫ್ಐಆರ್ಗಳನ್ನು ಒಟ್ಟುಗೂಡಿಸಿ ಮಧ್ಯಂತರ ರಕ್ಷಣೆ ಕೋರಿ ರಣವೀರ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾ ಸೂರ್ಯ ಕಾಂತ್ ಮತ್ತು ಎನ್ ಕೋಟಿಶ್ವರ್ ಸಿಂಗ್ ಪೀಠ ಪ್ರಕರಣಗಳಲ್ಲಿ ತನಿಖೆಗೆ ಸಹಕರಿಸುವಂತೆ ಸೂಚಿಸಿ ಯಾವುದೇ ಹೊಸ ಪ್ರಕರಣ ದಾಖಲಿಸಿದಂತೆ ನಿರ್ದೇಶಿಸಿ ಬಂಧನಕ್ಕೆ ಮಧ್ಯಂತರ ತಡೆ ನೀಡಿತು.
ಇದೇ ವೇಳೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಮತ್ತು ಅಸ್ಸಾಂ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಯಾವುದೇ ಬೆದರಿಕೆಗಳು ಬಂದ ಸಂದರ್ಭದಲ್ಲಿ ರಣವೀರ್ ಮಹಾರಾಷ್ಟ್ರ ಮತ್ತು ಅಸ್ಸಾಂ ಪೊಲೀಸರನ್ನು ಸಂಪರ್ಕಿಸಿ ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ಕೋರಬಹುದು ಎಂದು ಅದು ಹೇಳಿದೆ.
ವಿಚಾರಣೆ ವೇಳೆ ಯೂಟ್ಯೂಬರ್ ರಣವೀರ್ ಅವರ ಹೇಳಿಕೆಗೆ ನ್ಯಾ. ಸೂರ್ಯಕಾಂತ್ ಆಕ್ಷೇಪ ವ್ಯಕ್ತಪಡಿಸಿದರು. ನಿಮಗೆ ನಾಚಿಕೆ ಆಗಬೇಕು. ನೀವು ಬಳಸಿರುವ ಪದ ಅಸಭ್ಯ, ಅಶ್ಲೀಲ ಪದವಲ್ಲದೇ ಮತ್ತೇನು ಎಂದು ತೀವ್ರ ತರಾಟೆ ತೆಗೆದುಕೊಂಡಿದೆ.
ಮನಸ್ಸಿನಲ್ಲಿರುವ ಕೆಟ್ಟದ್ದನ್ನು ಯೂಟ್ಯೂಬ್ನಲ್ಲಿ ರಣವೀರ್ ಹೊರ ಹಾಕಿದ್ದಾರೆ. ಸಮಾಜಕ್ಕೆ ತನ್ನದೇ ಆದ ಮೌಲ್ಯಗಳಿವೆ. ಆ ಮೌಲ್ಯಗಳನ್ನು ನೀವು ಗೌರವಿಸಬೇಕು. ಸಮಾಜವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದ ನಿಯಮಗಳ ವಿರುದ್ಧ ಮಾತನಾಡುವ ಲೈಸೆನ್ಸ್ ಅನ್ನು ಯಾರಿಗೂ ಕೊಟ್ಟಿಲ್ಲ.ಇಡೀ ದೇಶದ ಪೋಷಕರನ್ನು ಅವಮಾನಿಸಿದ್ದೀರಿ. ನೀವು ಬಳಸಿರುವ ಪದಗಳು, ಹೆಣ್ಣು ಮಗಳು, ತಂದೆ, ತಾಯಿ, ಸೋದರಿಯರು, ಇಡೀ ಸಮಾಜ ನಾಚಿಕೆ ಪಡುವಂಥದ್ದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಇದು ಫನ್ನಿ ಕಾರ್ಯಕ್ರಮ ಅಲ್ಲ. ರಣವೀರ್ ಅಲಹಾಬಾದಿಯಾ ಸಂಪೂರ್ಣ ಜವಾಬ್ದಾರಿರಹಿತವಾಗಿ ವರ್ತಿಸಿದ್ದೀರಿ. ಮುಂದಿನ ಆದೇಶದವರೆಗೂ ರಣವೀರ್ ಅಲಹಾಬಾದಿಯಾ, ಸ್ನೇಹಿತರು ಯಾವುದೇ ಕಾರ್ಯಕ್ರಮ ಮಾಡಬಾರದು. ಇಂಡಿಯಾ ಗಾಟ್ ಲ್ಯಾಟೆಂಟ್ ಕಾರ್ಯಕ್ರಮ ಪ್ರಸಾರವಾಗಬಾರದು ಎಂದು ಸುಪ್ರೀಂಕೋರ್ಟ್ ಖಡಕ್ ಸೂಚನೆ ನೀಡಿದೆ.