ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ಶಂಷಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಹರಣ ಬೆದರಿಕೆ ಕೋಲಾಹಲ ಸೃಷ್ಟಿಸಿತ್ತು. ವಿಮಾನ ಹೈಜಾಕ್ ಮಾಡುವ ಬೆದರಿಕೆ ಬಂದ ಕೂಡಲೇ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಿದರು. ಹೈದರಾಬಾದ್ ನಿಂದ ದುಬೈಗೆ ಹೊರಟಿದ್ದ ಎಐ 951 ವಿಮಾನವನ್ನು ಹೈಜಾಕ್ ಮಾಡುವುದಾಗಿ ಇ-ಮೇಲ್ನಲ್ಲಿ ಬೆದರಿಕೆ ಬಂದ ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ದುಬೈಗೆ ತೆರಳುತ್ತಿದ್ದ ವಿಮಾನವನ್ನು ತಡೆದು ತಪಾಸಣೆ ನಡೆಸಿದರು. ವಿಮಾನವನ್ನು ರದ್ದುಗೊಳಿಸಿ, ಪ್ರಯಾಣಿಕರನ್ನು ಹೋಟೆಲ್ಗೆ ಸ್ಥಳಾಂತರಿಸಲಾಯಿತು.
ಮಧ್ಯರಾತ್ರಿ ನಡೆದ ಈ ಘಟನೆಯಿಂದ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಆದರೆ ಅದು ನಕಲಿ ಇ-ಮೇಲ್ ಎಂದು ತಿಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ತಿರುಪತಿ ಬದಿನೇನಿ, ಎಲ್. ವಿನೋದ್ ಕುಮಾರ್, ಪಿ. ರಾಕೇಶ್ ಕುಮಾರ್ ಎಂಬ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಯಾಕೆ ಅಂಥ ಮೇಲ್ ಕಳುಹಿಸಿದ್ದಾರೆ..? ಅದಕ್ಕೆ ಕಾರಣವೇನು? ಯಾವುದಾದರೂ ಪ್ಲಾನ್ ಹೊಂದಿದ್ದಾರೆಯೇ ಎಂಬುದರ ಆಧಾರದ ಮೇಲೆ ತನಿಖೆ ನಡೆಯುತ್ತಿದೆ.