ಹೊಸದಿಗಂತ ಡಿಜಿಟಲ್ ಡೆಸ್ಕ್
ಮಹಾರಾಷ್ಟ್ರದಲ್ಲಿ ಕೇಸರಿ ಪಕ್ಷವು ಸ್ಪರ್ಧಿಸಿದ ಎಲ್ಲಾ ಮೂರು ರಾಜ್ಯಸಭಾ ಸ್ಥಾನಗಳಲ್ಲಿ ಜಯಭೇರಿ ಭಾರಿಸಿದೆ. ಬಿಜೆಪಿ ಗೆಲುವು ಆಡಳಿತರೂಢ ಶಿವಸೇನೆಗೆ ಎದುರಾದ ಮುಖಭಂಗ ಎಂದೇ ವಿಶ್ಲೇಷಿಸಲಾಗುತ್ತಿದೆ. ಎರಡು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸ್ಪಷ್ಟವಾಗಿತ್ತು. ಇನ್ನೊಂದು ಸ್ಥಾನದಲ್ಲಿ ʼಶಿವಸೇನೆ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದೇ ಹೇಳಲಾಗುತ್ತಿತ್ತು.
ಅಂತಿಮ ಫಲಿತಾಂಶ ಹೊರಬಿದ್ದಾಗ ಮಹಾವಿಕಾಶ ಅಗಾಡಿ ಮೈತ್ರಿಕೂಟಕ್ಕೆ ಆಘಾತ ಎದುರಾಗಿತ್ತು. ಬಿಜೆಪಿ ಅಭ್ಯರ್ಥಿ ಗೆಲುವು ದಾಖಲಿಸಿದ್ದರು. ಬಿಜೆಪಿ ವಿಭಿನ್ನ ಕಾರ್ಯತಂತ್ರಕ್ಕೆ ಎದುರಾಳಿ ಪಕ್ಷದ ನಾಯಕರೂ ಮೆಚ್ಚಿ ತಲೆದೂಗಿದ್ದಾರೆ. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ʼಸ್ವತಂತ್ರʼರನ್ನು ತಮ್ಮ ಕಡೆಗೆ ಸೆಳೆಯುವಲ್ಲಿ ಪವಾಡ ನಡೆಸಿ ಯಶಸ್ವಿಯಾಗಿದ್ದಾರೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಶ್ಲಾಘಿಸಿದ್ದಾರೆ.
ಫಲಿತಾಂಶಗಳನ್ನು ನೋಡಿ ನನಗೆ ಆಘಾತವಾಗಿಲ್ಲ. ಎಂವಿಎ ಅಭ್ಯರ್ಥಿಗಳು ಶಾಸಕರ ಸಂಖ್ಯೆಗೆ ಅನುಗುಣವಾಗಿ ಮತಗಳನ್ನು ಪಡೆದರು. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ʼಸ್ವತಂತ್ರ ಶಾಸಕʼರನ್ನು ಸೆಳೆಯುವಲ್ಲಿ ಅನುಸರಿಸಿದ ಕಾರ್ಯತಂತ್ರವನ್ನು ಮೆಚ್ಚಲೇ ಬೇಕು. ಮಹಾವಿಕಾಸ ಅಗಾಡಿಯನ್ನು ಬೆಂಬಲಿಸುವ ಸಣ್ಣ ಪಕ್ಷಗಳನ್ನು ಅವರು ಒಲಿಸಿಕೊಂಡರು. ವಿಭಿನ್ನ ವಿಧಾನಗಳನ್ನು ಅನುಸರಿಸಿ ಸ್ವತಂತ್ರ ಶಾಸಕರನ್ನು ಬಿಜೆಪಿಯತ್ತ ಸೆಳೆಯಲು ಯಶಸ್ವಿಯಾದರು ಎಂದು ಪವಾರ್ ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ