ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಮಳೆಯ ನಡುವೆಯೂ ತಮ್ಮ ಭಾಷಣವನ್ನು ಮುಂದುವರೆಸಿದರು. ಭಾನುವಾರ ಮುಂಬೈನಲ್ಲಿ ಆಯೋಜಿಸಿದ್ದ ಎನ್ಸಿಪಿ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮಳೆ ಸುರಿಯಿತು. ಧೋ ಎಂದು ಸುರಿಯುತ್ತಿರುವ ಮಳೆಯ ನಡುವೆಯೇ 82ರ ಹರೆಯದ ಪವಾರ್ ಭಾಷಣ ಮಾಡಿರುವ ಫೋಟೋ, ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇಂದಿನ ಮಳೆ ನಮ್ಮ ಯೋಜನೆಗಳಿಗೆ ಅಡ್ಡಿಪಡಿಸಿದೆ. ಆದರೂ ಇಟ್ಟ ಹೆಜ್ಜೆ ಹಿಂದೆ ತೆಗೆಯುವ ಮಾತೇ ಇಲ್ಲ ಎಂದರು. ಏನೇ ಆಗಲಿ, ಹಿಂದೆ ಸರಿಯುವುದಿಲ್ಲ. ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಮುಂದೆಯೂ ನಮ್ಮ ಹೋರಾಟವನ್ನು ಮುಂದುವರಿಸಬೇಕಾಗಿದೆ ಎಂದು ಕಾರ್ಯಕರ್ತರನ್ನು ಹುರುದುಂಬಿಸಿದರು.
2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮೂರು ದಿನಗಳ ಮೊದಲು (ಅಕ್ಟೋಬರ್ 18), ಶರದ್ ಪವಾರ್ ಎನ್ಸಿಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಸತಾರಾಗೆ ತೆರಳಿದ್ದರು. ಪವಾರ್ ಮಾತನಾಡುತ್ತಿರುವಾಗಲೇ ಭಾರೀ ಮಳೆ ಸುರಿಯಿತು. ಮಳೆಯನ್ನು ಲೆಕ್ಕಿಸದೆ ಇದೇ ರೀತಿ ತಮ್ಮ ಭಾಷಣವನ್ನು ಮುಂದುವರಿಸಿದ್ದರು. ಇದು ಪಕ್ಷಕ್ಕೆ ಮಳೆ ದೇವರ ಆಶೀರ್ವಾದ ಎಂದಿದ್ದ ಮಾತುಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.