ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷದ ಅಭ್ಯರ್ಥಿಯಾಗಿ ಶರದ್ ಪವಾರ್ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತಾದರೂ ಆದರೆ ಸ್ವತಃ ಪವಾರ್ ಅವರೇ ಇದನ್ನು ಆಸಕ್ತಿ ತೋರಿಲ್ಲ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವರೂ ಆಗಿರುವ ಪ್ರಭಾವಿ ನೇತಾರ ಪವಾರ್ ಅವರನ್ನು ಪ್ರತಿಪಕ್ಷಗಳು ಒಮ್ಮತದಿಂದ ಆಯ್ಕೆ ಮಾಡಲು ನಿರ್ಧರಿಸಿದ್ದವು. ಕಾಂಗ್ರೆಸ್ ಕೂಡ ಇದಕ್ಕೆ ತನ್ನ ಬೆಂಬಲ ಘೋಷಿಸಿತ್ತು. ಆದರೆ, ಈ ಅವಕಾಶವನ್ನು ಪವಾರ್ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ದೆಹಲಿಯಲ್ಲಿ ಸಿಪಿಎಂ ನಾಯಕರಾದ ಸೀತಾರಾಂ ಯೆಚೂರಿ, ಡಿ.ರಾಜಾ, ಪ್ರಫುಲ್ ಪಟೇಲ್ ಮತ್ತು ಪಿ.ಸಿ. ಚಾಕೊ ಅವರನ್ನು ಭೇಟಿ ಮಾಡಿದ ಶರದ್ ಪವಾರ್ ಚುನಾವಣೆಗೆ ತಾವು ಸ್ಪರ್ಧಿಸಲು ಸಿದ್ಧರಿಲ್ಲ. ಇತರರನ್ನು ಪರಿಗಣಿಸುವಂತೆ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಸೀತಾರಾಂ ಯೆಚೂರಿ, ಶರದ್ ಪವಾರ್ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಇತರರ ಹೆಸರುಗಳನ್ನು ಪರಿಗಣಿಸಲಾಗುವುದು ಎಂದಿದ್ದಾರೆ.
ಶರದ್ ಪವಾರ್ ಅವರು ಸದಾ ಸಾಮಾನ್ಯ ಜನರೊಂದಿಗೆ ಇರುವ ವ್ಯಕ್ತಿ. ಅವರು ತಮ್ಮನ್ನು ರಾಷ್ಟ್ರಪತಿ ಭವನಕ್ಕೆ ಸೀಮಿತಗೊಳಿಸಿಕೊಳ್ಳಲು ಇಷ್ಟ ಪಡುತ್ತಿಲ್ಲ. 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರತಿಪಕ್ಷಗಳನ್ನು ಒಟ್ಟುಗೂಡಿಸುವ ಕೆಲಸದಲ್ಲಿ ಪವಾರ್ ನಿರತರಾಗಿದ್ದಾರೆ ಎಂದು ವರದಿಯಾಗಿದೆ.