ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ಮೇಲ್ಛಾವಣಿಯನ್ನು ಹೊದಿಕೆಯಿಂದ ಮುಚ್ಚಬೇಕು ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
ಚುನಾವಣಾ ವೇಳೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ, ಹಾಗಾಗಿ ಕಮಲ ಚಿಹ್ನೆಯಿರುವ ವಿಮಾನ ನಿಲ್ದಾಣದ ಮೇಲ್ಭಾಗವನ್ನು ಬಟ್ಟೆಯಿಂದ ಮುಚ್ಚಬೇಕು ಎಂದು ಕಾಂಗ್ರೆಸ್ ಮನವಿ ಮಾಡಿದೆ. ಜತೆಗೆ ಸರ್ಕಾರಿ ಬಸ್ಗಳ ಮೇಲೆ ಇರುವ ಸರ್ಕಾರಿ ಜಾಹೀರಾತುಗಳನ್ನು ತೆಗೆಯಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ನೇತೃತ್ವದ ನಿಯೋಗ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಕಮಲದ ಚಿಹ್ನೆ ಇರುವ ಟರ್ಮಿನಲ್ ಫೋಟೊವನ್ನು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಇದು ನಮ್ಮ ಸಾಧನೆ ಎಂದು ತೋರಿಸುತ್ತಿದ್ದಾರೆ. ಆದರೆ ಚುನಾವಣೆ ಮುಗಿಯುವವರೆಗೂ ಇದನ್ನು ಮುಚ್ಚುವುದು ಒಳ್ಳೆಯದು ಎಂದಿದ್ದಾರೆ.
ಬಿಜೆಪಿಯ ಕಮಲ ಚಿಹ್ನೆಯಲ್ಲಿರುವ ಕಟ್ಟಡದ ಬಗ್ಗೆ ಹಿಂದಿನಿಂದಲೇ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಆದರೂ ಕಟ್ಟಡವನ್ನು ಕಮಲದ ಚಿಹ್ನೆಯಲ್ಲಿಯೇ ಕಟ್ಟಲಾಗಿದೆ. ಕಮಲದ ಚಿಹ್ನೆ ಕಾಣುವ ಭಾಗವನ್ನು ಮುಚ್ಚಬೇಕು, ಇಲ್ಲವಾದರೆ ಕೆಪಿಸಿಸಿ ವತಿಯಿಂದಲೇ ಅದನ್ನು ಮುಚ್ಚಲಾಗುವುದು ಎಂದು ಹೇಳಿದ್ದಾರೆ. ಅದಕ್ಕೆ ಬಿಜೆಪಿ ಕೂಡ ವ್ಯಂಗ್ಯವಾಡಿದ್ದು, ನಿಮ್ಮ ಪಕ್ಷದ ಚಿಹ್ನೆ ಕೈ ಹಾಗಾಗಿ ಕೈ ತೆಗೆದಿಟ್ಟು ಬನ್ನಿ ಎಂದಿದ್ದಾರೆ.