ಹೊಸದಿಗಂತ ಡಿಜಿಟಲ್ ಡೆಸ್ಕ್
ಮಹಾರಾಷ್ಟ್ರ ರಾಜ್ಯದಲ್ಲಿ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಒವೈಸಿ ನೇತೃತ್ವದ ನಮ್ಮ ಪಕ್ಷವು ಶರತ್ತೊಂದರ ಮೇಲೆ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿಯನ್ನು ಬೆಂಬಲಿಸುತ್ತಿದೆ ಎಂದು ಆಲ್ ಇಂಡಿಯಾ ಮಜಿಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಇಮ್ತಿಯಾಜ್ ಜಲೀಲ್ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆ- ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಒಳಗೊಂಡಿರುವ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ಬೆಂಬಲಕ್ಕೆ ನಿಲ್ಲುವುದಾಗಿ ಎಐಎಂಐಎಂ ಘೋಷಿಸಿದೆ. ಪಕ್ಷದ ಇಬ್ಬರು ಶಾಸಕರು ಸಂಸತ್ತಿನ ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಪ್ರತಾಪ್ಘರ್ಹಿ ಅವರನ್ನು ಬೆಂಬಲಿಸಲಿದ್ದಾರೆ ಎಂದು ಜಲೀಲ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಆದರೆ ಇಲ್ಲೊಂದು ಟ್ವಿಸ್ಟ್ ಸಹ ಇದೆ. ಒವೈಸಿ ಪಕ್ಷವು ಮಹಾ ವಿಕಾಸ್ ಅಘಾಡಿಗೆ ಬೆಂಬಲ ಸೂಚಿಸಲು ಸುಮ್ಮನೆ ಒಪ್ಪಿಕೊಂಡಿಲ್ಲ. ಬದಲಾಗಿ ಮುಸ್ಲಿಂರ ಹಿತಾಸಕ್ತಿಗಳಿಗೆ ಪೂರಕವಾದ ಶರತ್ತುಗಳನ್ನಿಸಿರಿಸಿ, ಆ ಬಳಿಕವೇ ಬೆಂಬಲಕ್ಕೆ ಸಿದ್ಧವಾಗಿದೆ.
ಇಸ್ಲಾಮಿಕ್ ಪಕ್ಷವು ಪ್ರಸ್ತುತ ಮಹಾರಾಷ್ಟ್ರ ಸರ್ಕಾರದ ಮುಂದೆ ಹಲವಾರು ಷರತ್ತುಗಳನ್ನು ಇರಿಸಿದೆ. ಇದರಲ್ಲಿ ಮುಸ್ಲಿಮರಿಗೆ ಮೀಸಲಾತಿ, ಮಾಲೆಗಾಂವ್ ಮತ್ತು ಧುಲಿಯಾ ಅಭಿವೃದ್ಧಿ, ಮಹಾರಾಷ್ಟ್ರ ವಕ್ಫ್ ಬೋರ್ಡ್ನ ಆದಾಯ ಹೆಚ್ಚಳ ಮತ್ತು ಮಹಾರಾಷ್ಟ್ರ ಲೋಕಸೇವಾ ಆಯೋಗದಲ್ಲಿ (MPSC) ಒಬ್ಬ ಮುಸಲ್ಮಾನರ ನೇಮಕ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ