ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವಿನಿಂದಾದ ಉಂಟಾದ ವಿವಾದ ರಾಜ್ಯದಲ್ಲಿ ಧ್ವಜ ದಂಗಲ್ಗೆ ಕಾರಣವಾಗಿದೆ.
ಶಿವಾಜಿನಗರದ ಚಾಂದಿನಿ ಚೌಕ್ನಲ್ಲಿ ಅಳವಡಿಸಿದ್ದ ಹಸಿರು (ಮುಸ್ಲಿಂ) ಧ್ವಜವನ್ನು ಬೆಂಗಳೂರು ಪೊಲೀಸರು ತೆರವುಗೊಳಿಸಿದ್ದಾರೆ.
ಕೆರಗೋಡಿನಲ್ಲಿ ಸ್ಥಳೀಯ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ವತಿಯಿಂದ 108 ಅಡಿ ಎತ್ತರದ ಧ್ವಜಸ್ತಂಭ ನಿರ್ಮಿಸಿ ಅದರಲ್ಲಿ ಹನುಮಧ್ವಜ ಅಳವಡಿಕೆ ಮಾಡಲಾಗಿತ್ತು. ಆದರೆ, ಸಾರ್ವಜನಿಕ ಸ್ಥಳದಲ್ಲಿ ಒಂದು ಧರ್ಮಕ್ಕೆ ಸಂಬಂಧಿಸಿದ ಧ್ವಜವನ್ನು ಹಾರಿಸುವಂತಿಲ್ಲ ಎಂದು ಸರ್ಕಾರ ಕೂಡಲೇ ಅದನ್ನು ತೆರವು ಮಾಡಲು ಮುಂದಾಗಿತ್ತು. ಇದರ ಬೆನ್ನಲ್ಲಿಯೇ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದಾರೆ. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ರಾಜ್ಯಾದ್ಯಂತ ಕೇಸರಿ ಧ್ವಜದ ದಂಗಲ್ ಸೃಷ್ಟಿಯಾಗಿದೆ.
ಇತ್ತ ಶಿವಾಜಿನಗರದ ಚಾಂದಿನಿ ಚೌಕ್ನ ಹೈ-ಮಾಸ್ಕ್ ವಿದ್ಯುತ್ ಕಂಬದಲ್ಲಿ ಅಳವಡಿಕೆ ಮಾಡಲಾಗಿದ್ದ ಹಸಿರು (ಮುಸ್ಲಿಂ) ಧ್ವಜವನ್ನು ಬೆಂಗಳೂರು ಪೊಲೀಸರು ತೆರವುಗೊಳಿಸಿದ್ದಾರೆ. ನಂತರ ಮತ್ತೊಮ್ಮೆ ಅಲ್ಲಿ ಯಾವುದೇ ಧರ್ಮದ ಬಾವುಟವನ್ನು ಅಳವಡಿಕೆ ಮಾಡಲು ಅವಕಾಶವಿಲ್ಲದಂತೆ ರಾಷ್ಟ್ರಧ್ವಜದ ಬಾವುಟವನ್ನು ಅಳವಡಿಕೆ ಮಾಡಲಾಗಿದೆ.
ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್ನಲ್ಲಿ ಹೈಮಾಸ್ಕ್ ವಿದ್ಯುತ್ ದೀಪದ ಕಂಬದಲ್ಲಿ ಮುಸ್ಲಿಂ ಧ್ವಜ ಹಾರಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್ನಲ್ಲಿ) ಪೋಸ್ಟ್ ಹಂಚಿಕೊಂಡು ಬೆಂಗಳೂರು ನಗರ ಪೊಲೀಸರು ಹಾಗೂ ಬಿಬಿಎಂಪಿ ಆಯುಕ್ತರಿಗೆ ಡ್ಯಾಗ್ ಮಾಡಲಾಗಿತ್ತು. ಶಿವಾಜಿನಗರದ ಚಾಂದಿನಿ ಚೌಕ್ ಬಿಬಿಎಂಪಿ ವ್ಯಾಪ್ತಿಗೆ ಸೇರಿರುತ್ತದೆ. ಕೂಡಲೇ ಎಚ್ಚೆತ್ತುಕೊಂಡ ಬೆಂಗಳೂರು ಪೊಲೀಸರು ಚಾಂದಿನಿ ಚೌಕ್ನಲ್ಲಿ ಮುಸ್ಲಿಂ ಧ್ವಜ ಅಳವಡಿಕೆ ಮಾಡಲು ಬಿಬಿಎಂಪಿ ಅನುಮತಿ ಪಡೆದಿದ್ದಾರೆಯೇ ಎಂದು ಪರಿಶೀಲನೆ ಮಾಡಿದ್ದಾರೆ. ಆಗ ಯಾವುದೇ ಅನುಮತಿಯನ್ನೂ ಪಡೆಯದೇ ಅನಧಿಕೃತವಾಗಿ ಒಂದು ಧರ್ಮದ ಧ್ವಜ ಅಳವಡಿಕೆ ಮಾಡಿವುದು ತಿಳಿದುಬಂದಿದೆ.
ಶಿವಾಜಿನಗರದ ಚಾಂದಿನಿ ಚೌಕ್ ನಲ್ಲಿ ಹಸಿರು ಬಾವುಟ ಹಾರಾಟವನ್ನು ತೆರವುಗೊಳಿಸಲು ಮುಂದಾದ ಪೊಲೀಸ್ ಇಲಾಕೆ ಬಿಬಿಎಂಪಿ ಬೀದಿ ದೀಪ ನಿರ್ವಹಣೆ ಸಿಬ್ಬಂದಿಯ ನೆರವಿನೊಂದಿಗೆ ಚಾಂದಿನ ಚೌಕ್ನಲ್ಲಿದ್ದ ಮುಸ್ಲಿಂ ಧ್ವಜ ತೆರವುಗೊಳಿಸಿ ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಆದರೆ, ಈ ಬಗ್ಗೆ ಸ್ಥಳೀಯ ಮಸೀದಿ ಸಿಬ್ಬಂದಿ ಹಾಗೂ ಮುಸ್ಲಿಂ ಸಮುದಾಯದ ಮುಖಂಡರನ್ನು ಕರೆಸಿ ಪೊಲೀಸರು ತಿಳುವಳಿಕೆ ಹೇಳಿದ್ದಾರೆ.