ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗ ಪತ್ತೆಯಾದ ಹಿನ್ನೆಲೆ ನ್ಯಾಯಾಲಯವು ಆ ಸ್ಥಳವನ್ನು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಸೀಲ್ ಮಾಡುವಂತೆ ಆದೇಶಿಸಿದೆ.
ಮಸೀದಿಯ ಹಿಂದಿರುವ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರವೇಶ ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ ನಂತರ ಮಸೀದಿ ಸಂಕೀರ್ಣದ ಚಿತ್ರೀಕರಣಕ್ಕೆ ನ್ಯಾಯಾಲಯ ಆದೇಶಿಸಿದ್ದು,ಈ ರೀತಿ ಚಿತ್ರೀಕರಣದ ಕೊನೆಯ ದಿನದಂದು ಶಿವಲಿಂಗ ಅಥವಾ ಶಿವನ ಅವಶೇಷವು ಕಂಡುಬಂದಿದೆ ಎಂದು ವರದಿಯಾಗಿದೆ.
ಇಂದು ಬೆಳಗ್ಗೆ ಕೊಳದಿಂದ ನೀರನ್ನು ಹರಿಸುವಾಗ ಶಿವಲಿಂಗ ಕಂಡುಬಂದಿದೆ ಎಂದು ದೇಗುಲದಲ್ಲಿ ಪ್ರಾರ್ಥನೆ ಮಾಡಲು ವರ್ಷಪೂರ್ತಿ ಪ್ರವೇಶವನ್ನು ಕೋರಿರುವ ಹಿಂದು ಮಹಿಳೆಯರ ಗುಂಪನ್ನು ಪ್ರತಿನಿಧಿಸುವ ವಕೀಲ ಸುಭಾಷ್ ನಂದನ್ ಚತುರ್ವೇದಿ ಹೇಳಿದ್ದಾರೆ.
ಇದೀಗ ಇಸ್ಲಾಮಿಕ್ ವುಜು ಅಥವಾ ಶುದ್ಧೀಕರಣ ಆಚರಣೆಗಳಿಗಾಗಿ ಬಳಸಲಾಗುವ ಕೊಳದಲ್ಲಿ ಶಿವ ಲಿಂಗ ಪತ್ತೆಯಾದ ನಂತರ ಸಂಪೂರ್ಣವಾಗಿ ಬಂದ್ ಮಾಡಬೇಕಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದರು. ನ್ಯಾಯಾಲಯವು ಮನವಿಯನ್ನು ಸ್ವೀಕರಿಸಿ, ಸದ್ಯಕ್ಕೆ ಕೊಳವನ್ನು ಬಳಸದಂತೆ ನೋಡಿಕೊಳ್ಳಲು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಆದೇಶಿಸಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್, ಪೊಲೀಸ್ ಮುಖ್ಯಸ್ಥರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಉನ್ನತ ಅಧಿಕಾರಿಗಳು ಸೀಲ್ ಮಾಡಿದ ಪ್ರದೇಶಕ್ಕೆ ಯಾರೂ ಕೂಡ ಪ್ರವೇಶಿಸದಂತೆ ನೋಡಿಕೊಳ್ಳುತ್ತಾರೆ ಎಂದು ನ್ಯಾಯಾಲಯ ಹೇಳಿದೆ.