ಹೊಸದಿಗಂತ ವರದಿ ಬೆಳಗಾವಿ:
ಬಹುಕೋಟಿ ಆರೋಪಿ ಶಿವಾನಂದ ನೀಲಣ್ಣವರ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಮಹತ್ವದ ಘಟ್ಟಕ್ಕೆ ತಲಪಿದ್ದು ಸಿಐಡಿ ಅಧಿಕಾರಿಗಳ ಹತ್ತು ದಿನಗಳ ಪೊಲೀಸ ಕಸ್ಟಡಿ ಅಂತ್ಯವಾದ ಬಳಿಕ, ಬುಧವಾರ ಬೆಳಗಾವಿಯ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ವಿಚಾರನೆಗೆ ಹಾಜರು ಪಡಿಸಿದ್ದರು.
ನ್ಯಾಯಾಲಯವು ವಿಚಾರನೆಯನ್ನು ಒಳಪಡಿಸಿದ ಬಳಿಕ ಮತ್ತೆ ಶಿವಾನಂದ ನೀಲಣ್ಣವರ್ 14ದಿನಗಳ ಕಾಲ ನ್ಯಾಯಾಂಗ ಬಂಧನ ನೀಡಿ ಕೋರ್ಟ್ ಆದೇಶ ಹೋರಡಿಸಿದೆ.
ಜಾಮೀನು ಅಜಿಗೆ ನೀಲಣ್ಣನವರ್ ಪರ ವಕೀಲರು ಅರ್ಜಿ ಸಲ್ಲಿಕೆ ಮುಂದಾಗಿದ್ದು, ಮತ್ತೊಂದೆಡೆ ಪ್ರಕರಣ ತನಿಖೆಯಲ್ಲಿ ಸಿಐಡಿ ಅಧಿಕಾರಿಗಳು ಎರಡು ಪ್ರತ್ಯೇಕ ಹೂಡಿಕೆದಾರರ ಲಿಸ್ಟ್ ಸಿದ್ಧಪಡಿಸಿದ್ದಾರೆ ಎನ್ನಲಾಗುತ್ತಿದೆ. 2ನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಹಾಜರುಪಡಿಸಿದರು. ಸಿಐಡಿ ಡಿವೈಎಸ್ಪಿ ಕೋದಂಡರಾಮ್ ನೇತೃತ್ವದ ತಂಡ ವೈದ್ಯಕೀಯ ತಪಾಸಣೆ ಬಳಿಕ ಕೋರ್ಟ್ಗೆ ಕರೆತಂದಿತ್ತು.
ಪ್ರಕರಣದ ತನಿಖೆ ಇನ್ನೂ ಮುಂದುವರಿದಿರುವ ಹಿನ್ನೆಲೆ ಸಿಐಡಿ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಮನವಿ ಸಲ್ಲಿಸಿದರು. ಮನವಿಯನ್ನು ಪರಿಗಣಿಸಿದ ನ್ಯಾಯಾಧೀಶ ಗಂಗಾಧರ್ ಕೆ. ಶಿವಾನಂದ ನೀಲಣ್ಣವರ್ ಅವರನ್ನು ಜೂನ್ 9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶವನ್ನು ಹೋರಡಿಸಿದ್ದಾರೆ.
ಇದನ್ನೂ ಓದಿ:
ಹತ್ತು ದಿನಗಳ ಸಿಐಡಿ ಕಸ್ಟಡಿ ಅಂತ್ಯಗೊಂಡ ಬಳಿಕ ನೀಲಣ್ಣವರ ಹಿಂಡಲಗಾ ಜೈಲಿಗೆ ರವಾನೆ ಮಾಡಲಾಯಿತು. ಇದಕ್ಕೂ ಮೊದಲು ನಡೆದ ಕೋರ್ಟ್ ವಿಚಾರಣೆ ವೇಳೆ ಶಿವಾನಂದ ನೀಲಣ್ಣವರ್ ತಮ್ಮ ಆರೋಗ್ಯ ಸಮಸ್ಯೆ ಇದೆ. ಎದೆನೋವು ಇರುವುದಾಗಿ ತಿಳಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ವೈದ್ಯರು ಪರೀಕ್ಷಿಸಿ ಅಗತ್ಯ ಚಿಕಿತ್ಸೆ ಬಗ್ಗೆ ಹೇಳುತ್ತಾರೆ. ಬಿಮ್ಸ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತದೆ. ಇನ್ನೂ ಹೆಚ್ಚಿನ ಚಿಕಿತ್ಸೆ ಬೇಕಿದ್ದರೆ ವಕೀಲರ ಮೂಲಕ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದರು.
‘ಗ್ರೀನ್-ರೆಡ್’ ಇನ್ವೆಸ್ಟರ್ ಲಿಸ್ಟ್
ಈ ಪ್ರಕರಣ ತನಿಖೆಯಲ್ಲಿ ಸಿಐಡಿ ಅಧಿಕಾರಿಗಳು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದು ಹತ್ತು ದಿನಗಳ ವಿಚಾರಣೆ ವೇಳೆ ಹೂಡಿಕೆದಾರರ ಎರಡು ಪ್ರತ್ಯೇಕ ಲಿಸ್ಟ್ ಗಳನ್ನ ಮಾಡಿಕೊಂಡಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅದರಲ್ಲಿ ಒಂದು “ಗ್ರೀನ್ ಇನ್ವೆಸ್ಟರ್ ಲಿಸ್ಟ್”, ಮತ್ತೊಂದು “ರೆಡ್ ಇನ್ವೆಸ್ಟರ್ ಲಿಸ್ಟ್”. ಗ್ರೀನ್ ಲಿಸ್ಟ್ನಲ್ಲಿ ಈಗಾಗಲೇ ದುಪ್ಪಟ್ಟು ಹಣ ಪಡೆದವರ ಮಾಹಿತಿ ಸೇರಿದ್ದರೆ, ರೆಡ್ ಲಿಸ್ಟ್ನಲ್ಲಿ ಹಣ ಕಳೆದುಕೊಳ್ಳುವ ಆತಂಕದಲ್ಲಿರುವ ಹೂಡಿಕೆದಾರರ ವಿವರಗಳಿವೆ ಎನ್ನಲಾಗಿದೆ. ಹಾಗಾಗಿ ಗ್ರೀನ್ ವಿಭಾಗದ ಹೂಡಿಕೆದಾರರಿಂದ ರೆಡ್ ವಿಭಾಗದವರಿಗೆ ಹಣ ವರ್ಗಾವಣೆ ಮಾಡ್ತಾರೆ ಎಂಬ ಮಾಹಿತಿ ಇದ್ದು, ಈ ನಡುವೆ ಶಿವಾನಂದ ನೀಲಣ್ಣವರ್ ಖರೀದಿಸಿದ ಐಷಾರಾಮಿ ಕಾರುಗಳನ್ನು ಕೂಡ ಸಿಐಡಿ ಅಧಿಕಾರಿಗಳು ಪಂಚನಾಮೆ ನಡೆಸಿ ಈಗಾಗಲೇ ಜಪ್ತಿ ಮಾಡಿದ್ದಾರೆ.
ಡಿಪೇಂಡರ್, ವೈಲಫೈಯರ್, ಮರ್ಸಿಡಿಸ್ ಬೆಂಚ್ ಕಾರು ಸೇರಿವೆ. ಇನ್ನೂ ಪ್ರಕರಣದ ಸಂಬಂಧಿಸಿದಂತೆ ಶಿವಾನಂದ ನೀಲಣ್ಣವರ್ ಪರ ವಕೀಲ ಆರ್.ಪಿ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಜಾಮೀನು ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಜೂನ್ 1ರಂದು ಜಾಮೀನು ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಯಾರು ಕೂಡ ನೇರವಾಗಿ ನೀಲಣ್ಣವರ್ ವಿರುದ್ಧ ದೂರು ನೀಡಿಲ್ಲ. ಕಾಗವಾಡದಲ್ಲಿ ದಾಖಲಾಗಿರುವ ದೂರಿನ ಮಾಹಿತಿ ಪಡೆಯುತ್ತಿದ್ದೇವೆ. ಮೊದಲು ಜಾಮೀನು ಪಡೆಯಲು ಪ್ರಯತ್ನಿಸುತ್ತೇವೆ. ಬಳಿಕ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೊಗುತ್ತೇವೆ ಎಂದು ತಿಳಿಸಿದರು.



