ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದೆಲ್ಲೆಡೆ ನಿನ್ನೆ ಭಕ್ತಿಪೂರ್ವಕ ಮಹಾಶಿವರಾತ್ರಿ ಆಚರಣೆ ಮಾಡಲಾಗಿದೆ. ದಿನವಿಡೀ ಫಲತಾಂಬೂಲಗಳ ಉಪವಾಸವಿದ್ದು, ರಾತ್ರಿಯಿಡೀ ಶಿವನಾಮಸ್ಮರಣೆ ಮಾಡುತ್ತಾ ಜನ ಜಾಗರಣೆ ಮಾಡಿದ್ದಾರೆ.
ರಾಜ್ಯದ ಎಲ್ಲೆಡೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿದ್ದು, ರಾತ್ರಿ ಭಜನೆ ಕಾರ್ಯಕ್ರಮಗಳು ನಡೆದಿವೆ. ಪ್ರತಿ ದೇವಸ್ಥಾನದ ಮುಂದೆಯೂ ಪ್ರಸಾದ ವಿನಿಯೋಗ ನಡೆದಿದೆ.
ಕೊಯಂಬತ್ತೂರಿನ ಈಶಾ ಫೌಂಡೇಷನ್ನಲ್ಲಿ ಅದ್ಧೂರಿಯಾದ ಶಿವರಾತ್ರಿ ಜಾಗರಣೆ ನೆರವೇರಿದೆ. ಎರಡು ಲಕ್ಷಕ್ಕೂ ಅಧಿಕ ಭಕ್ತರು ಜಾಗರಣೆಯಲ್ಲಿ ಭಾಗಿಯಾಗಿದ್ದಾರೆ. ಸೆಲೆಬ್ರಿಟಿಗಳು ಸಹಿತ ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರದ ಈಶಾ ಫೌಂಡೇಷನ್ನಲ್ಲಿಯೂ ಜಾಗರಣೆ ನಡೆದಿದ್ದು, ಅನೇಕ ಭಕ್ತರು ಆಗಮಿಸಿ ಶಿವನ ಭಕ್ತಿಗೆ ಪಾತ್ರರಾಗಿದ್ದಾರೆ. ದೇವಸ್ಥಾನಗಳಿಗೆ ಹೋಗಲಾಗದ ಜನರು ತಮ್ಮ ಏರಿಯಾಗಳಲ್ಲಿ, ಮನೆಗಳಲ್ಲಿಯೇ ಜನರ ಜೊತೆಗೂಡಿ ಜಾಗರಣೆ ಮಾಡಿದ್ದಾರೆ.
ಇಂದು ಜಾಗರಣೆಯ ಮರುದಿನವಾಗಿದ್ದು, ಹೋಳಿಗೆ, ಲಡ್ಡು, ಕಿಲ್ಸ ಇನ್ನಿತರ ಸಿಹಿತಿಂಡಿಗಳ ಜತೆ ಹಬ್ಬದ ಆಚರಣೆ ಮಾಡಲಾಗುತ್ತದೆ.



