ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರವಾಡ (Dharwad) ಪ್ರವೇಶಕ್ಕೆ ಅನುಮತಿ ಕೋರಿದ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ (Vinay Kulakarni) ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ (High Court) ವಜಾ ಮಾಡಿದೆ.
ಚುನಾವಣೆಗೆ ಸ್ಪರ್ಧಿಸಿರುವುದರಿಂದ ಧಾರವಾಡಕ್ಕೆ ಪ್ರವೇಶಿಸಲು ಅನುಮತಿ ನೀಡುವಂತೆ ವಿನಯ್ ಕುಲಕರ್ಣಿ ಪರ ವಕೀಲರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಧಾರವಾಡಕ್ಕೆ ಪ್ರವೇಶಿಸದಂತೆ ಸುಪ್ರೀಂಕೋರ್ಟ್ ನಿರ್ಬಂಧಿಸಿದೆ. ಹಾಗಿದ್ದಾಗ ಹೈಕಮಾಂಡ್ ಧಾರವಾಡದಿಂದ ಟಿಕೆಟ್ ಏಕೆ ಕೊಟ್ಟಿದೆ ಎಂದು ವಿನಯ್ ಕುಲಕರ್ಣಿ ಪರ ವಕೀಲರಿಗೆ ಪ್ರಶ್ನಿಸಿದೆ. ನಂತರ ಹೈಕೋರ್ಟ್ ವಿನಯ್ ಕುಲಕರ್ಣಿ ಅವರ ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ.
ಬಿಜೆಪಿ ಮುಖಂಡ ಯೋಗೀಶ್ ಗೌಡ (Yogish Gowda) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ 90 ಸಾಕ್ಷಿಗಳಿದ್ದಾರೆ. ವಿನಯ್ ಕಲಕರ್ಣಿಗೆ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿದರೆ ಪ್ರಕರಣಕ್ಕೆ ಸಮಸ್ಯೆಯಾಗಬಹುದು. ಸೂಚಕರ ಮೂಲಕವೇ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದು ಕೋರ್ಟ್ ಮುಂದೆ ಸಿಬಿಐ ಪರ ವಕೀಲ ವಾದ ಮಂಡಿಸಿದ್ದರು. ಇದನ್ನು ಆಲಿಸಿದ ನ್ಯಾಯಮೂರ್ತಿ ಬಿ. ಜಯಂತ ಕುಮಾರ್ ಅವರು ಇದ್ದ ಪೀಠ, ವಿನಯ್ ಕುಲಕರ್ಣಿ ಮನವಿಯನ್ನು ತಿರಸ್ಕರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪ ಆದೇಶ ಹೊರಡಿಸಿತ್ತು.
ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದ ವಿನಯ್ ಕುಲಕರ್ಣಿ ಅವರಿಗೆ ಮತ್ತೆ ಹಿನ್ನೆಡೆಯಾಗಿದೆ.