ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಸಿದ್ಧತೆ ನಡುಸುತ್ತಿರುವ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಕೆಎಲ್ ರಾಹುಲ್ ಮೊದಲೆರಡು ಪಂದ್ಯಗಳಿಂದ ಹೊರಗುಳಿಯುತ್ತಿರುವುದು.
ಫಿಟ್ನೆಸ್ ಸಮಸ್ಯೆಯ ಕಾರಣ ರಾಹುಲ್ ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿಯುತ್ತಿಲ್ಲ.
ಆದರೆ 17 ಸದಸ್ಯರ ಬಳಗದಲ್ಲಿ ಬದಲಿ ವಿಕೆಟ್ ಕೀಪರ್ ಆಗಿ ಇರುವುದು ಇಶಾನ್ ಕಿಶನ್ ಮಾತ್ರ. ಒಂದು ವೇಳೆ ಯುವ ಎಡಗೈ ದಾಂಡಿಗನನ್ನು ಕೀಪರ್ ಆಗಿ ಕಣಕ್ಕಿಳಿಸಿದರೆ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕ ಕೂಡ ಬದಲಾಗಬಹುದು.
ಅಂದರೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಇಲ್ಲಿ ಟೀಮ್ ಇಂಡಿಯಾ ಮುಂದೆ ಇಶಾನ್ ಕಿಶನ್ ಎಂಬ ಆಯ್ಕೆಯಿದ್ದರೂ, ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ.
ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಶ್ರೇಯಸ್ ಅಯ್ಯರ್ ಕಂಬ್ಯಾಕ್ ಮಾಡುವುದು ಖಚಿತವಾಗಿದೆ. ಎಲ್ಲಾ ರೀತಿಯ ಫಿಟ್ನೆಸ್ ಟೆಸ್ಟ್ನಲ್ಲೂ ಅಯ್ಯರ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
ಇದರೊಂದಿಗೆ ಏಷ್ಯಾಕಪ್ನಲ್ಲಿ ಶ್ರೇಯಸ್ ಅಯ್ಯರ್ ಕಣಕ್ಕಿಳಿಯುವುದು ಖಚಿತವಾಗಿದೆ. ಆದರೀಗ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಕಾಣಿಸಿಕೊಂಡರೆ, ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಕ್ರಮಾಂಕದಲ್ಲೂ ಬದಲಾವಣೆ ಕಂಡು ಬರಬಹುದು.
ಒಟ್ಟಿನಲ್ಲಿ ಮಹತ್ವದ ಟೂರ್ನಿಯ ಮೊದಲೆರಡು ಪಂದ್ಯಗಳಿಂದ ಕೆಎಲ್ ರಾಹುಲ್ ಹೊರಗುಳಿದಿರುವುದು ಟೀಮ್ ಇಂಡಿಯಾ ಪಾಲಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.
ನಾಳೆಯಿಂದ (ಆಗಸ್ಟ್ 30) ಏಷ್ಯಾಕಪ್ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.