ಹೊಸದಿಗಂತ ವರದಿ,ಮೈಸೂರು:
ಜಿಲ್ಲೆಯ ತಿ.ನರಸೀಪುರ ತಾಲೂಕಿನ ಲ್ಲಿ ಚಿರತೆಗಳ ದಾಳಿ ಮುಂದುವರಿದಿದ್ದು, ಶುಕ್ರವಾರ ರಾತ್ರಿ ಮತ್ತೊಬ್ಬ ಮಹಿಳೆ ಚಿರತೆಗೆ ಬಲಿಯಾಗಿದ್ದಾರೆ.
ತಿ.ನರಸೀಪುರ ತಾಲೂಕಿನ ಕನ್ನಾಯಕನಹಳ್ಳಿಯ ನಿವಾಸಿ ಸಿದ್ದಮ್ಮ (60) ಚಿರತೆ ದಾಳಿಗೆ ಸಾವಿಗೀಡಾದವರು. ಇವರು ಮನೆಯ ಹಿಂಭಾಗವಿರುವ ಹಿತ್ತಲಿನಲ್ಲಿ ಸೌದೆ ತರಲೆಂದು ಹೋದಾಗ ಅಲ್ಲಿ ಹೊಂಚು ಹಾಕಿ ಕುಳಿತ್ತಿದ್ದ ಚಿರತೆ ದಾಳಿ ನಡೆಸಿ ಕತ್ತನಲ್ಲಿ ರಕ್ತ ಹೀರಿ, ಮುಖ ಕಚ್ಚಿ ಸಾಯಿಸಿದೆ. ಸಿದ್ದಮ್ಮರ ಚಿರಾಟ ಕೇಳಿ ಆಕೆಯ ಮನೆಯವರು, ಅಕ್ಕಪಕ್ಕದ ವರು ಸ್ಥಳಕ್ಕೆ ಧಾವಿಸುತ್ತಿದ್ದಂತೆಯೇ ಚಿರತೆ ಪರಾರಿಯಾಯಿತು. ಮೃತಳ ಕುಟುಂಬದ ವರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆ ಯಿಂದ ಗ್ರಾಮದ ಜನರು ಭಯ ಭೀತರಾಗಿದ್ದು ಕೂಡಲೇ ಚಿರತೆಗಳನ್ನು ಸೆರೆ ಹಿಡಿಯಿರಿ, ಇಲ್ಲವೇ ಗುಂಡಿಕ್ಕಿ ಕೊಲ್ಲಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿ, ಮೃತಳ ಕುಟುಂಬಕ್ಕೆ ಪರಿಹಾರವನ್ನು ನೀಡುವ ಭರವಸೆ ನೀಡಿದರು. ಅಲ್ಲದೇ ಚಿರತೆ ಸೆರೆಗೆ ಕಾರ್ಯಚರಣೆ ನಡೆಸುತ್ತಿದ್ದಾರೆ. ಈ ತಾಲೂಕಿನಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಚಿರತೆ ದಾಳಿಗೆ ಮೂರು ಮಂದಿ ಬಲಿಯಾದರು. ಹಲವಾರು ಮಂದಿ ಗಾಯಗೊಂಡಿದ್ದರು.