April 14, 2026
Tuesday, April 14, 2026
spot_img

ವಿಜಯಪುರದಲ್ಲಿ ಶಾಕಿಂಗ್ ಘಟನೆ: ನೋಡಲು ತನ್ನಂತಿಲ್ಲ ಎಂದು ಹೆತ್ತ ಮಗನನ್ನೇ ನದಿಗೆ ಎಸೆದ ತಂದೆ

ಹೊಸದಿಗಂತ ವರದಿ, ವಿಜಯಪುರ:

ಮಗ ನೋಡಲು ತನ್ನಂತೆ ಇಲ್ಲ ಎಂದು ಹೇಳುತ್ತಿದ್ದ ಸ್ನೇಹಿತರ ತಮಾಷೆ ಮಾತಿಗೆ ಬೇಸತ್ತು ಹೆತ್ತ ಮಗನ್ನೇ ಕೃಷ್ಣಾ ನದಿಗೆ ಎಸೆದು ಹತ್ಯೆ ಮಾಡಿದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಬಂಧಿತ ಆರೋಪಿ.

ಮಲ್ಲಿಕಾರ್ಜುನ ಅರಕೇರಿ ತನ್ನ ಮಗ ಸಿದ್ದಾರ್ಥ (6) ತನ್ನ ಮುಖದ ಹೋಲಿಕೆ ಹೊಂದಿಲ್ಲ ಎಂದು ಆತನ ಸ್ನೇಹಿತರು ತಮಾಷೆ ಮಾಡುತ್ತಿದ್ದರು. ಈ ರೀತಿ ದಿನ ನಿತ್ಯ ತಮಾಷೆ ಮಾಡುತ್ತಿದ್ದ ಸ್ನೇಹಿತರ ಮಾತಿಗೆ ಬೇಸತ್ತು ಮಲ್ಲಿಕಾರ್ಜುನ ಅರಕೇರಿ, ಮಗನನ್ನು ಹತ್ಯೆ ಮಾಡಲು ಸಂಚು ರೂಪಿಸಿ, ಮಾ. 16 ರಂದು ಮಗನನ್ನು ಕೋಚಿಂಗ್ ಸೆಂಟರ್‌ಗೆ ಸೇರಿಸಲು ಸಿಂದಗಿಗೆ ಕರೆದುಕೊಂಡು ಹೋಗುವೆ ಎಂದು ಮನೆಯವರಿಗೆ ಹೇಳಿ, ಮಗುವನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾನೆ. ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಕರಾಡ್ ಬಳಿ ಕೃಷ್ಣಾ ನದಿಗೆ ಮಗುವನ್ನು ಎಸೆದು ವಾಪಸ್ ಊರಿಗೆ ಬಂದು, ಏನೂ ಆಗಿಲ್ಲವೆಂಬಂತೆ ನಟನೆ ಮಾಡಿದ್ದಾನೆ.

ಏ. 1 ರಂದು ಸಿದ್ದಾರ್ಥನ ಬರ್ತಡೇ ಇರುವ ಕಾರಣ ಮಾ. 31 ರಂದು ಮಗನಿಗೆ ಭೇಟಿ ಮಾಡಿಸುತ್ತೇನೆ ಎಂದು ಮಲ್ಲಿಕಾರ್ಜುನ ಹೆಂಡತಿಯನ್ನು ಕರೆದುಕೊಂಡು ಜಿಲ್ಲೆಯ ಸಿಂದಗಿಗೆ ಹೋಗಿ ಇಡೀ ದಿನ ಅಲ್ಲಿ ಸುತ್ತಾಡಿಸಿ ಕೊನೆಗೆ ಮಗನಿಗೆ ಭೇಟಿಯೇ ಮಾಡಿಸಿಲ್ಲ, ಇದರಿಂದ ಆತಂಕಗೊಂಡು ಹಿರಿಯರನ್ನು ಸೇರಿಸಿ ಭಾಗ್ಯಶ್ರೀ ಕೇಳಿದ್ದಾಳೆ. ಈ ವೇಳೆ ಆತ ಹೆಂಡತಿ ಮುಂದೆ ಮಗನನ್ನು ಮರೆತು ಬಿಡು ಎಂದು ಹೇಳಿ ಮನೆಯಿಂದ ಹೋಗಿದ್ದಾನೆ.

ಬಳಿಕ ಮಗ ಹಾಗೂ ಪತಿ ಕಾಣೆಯಾದ ಕುರಿತು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದೂರನ್ನು ನೀಡಲಾಗಿದೆ. ಬಳಿಕ ಮಲಿಕಾರ್ಜುನನ್ನು ಕರೆ ತಂದ ಪೊಲೀಸರು ವಿಚಾರಣೆ ನಡೆಸಿದಾಗ ಮಗನನ್ನು ಕೃಷ್ಣಾ ನದಿಗೆ ಬೀಸಾಕಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಮಲ್ಲಿಕಾರ್ಜುನ ಅರಕೇರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !